ಹಾವೇರಿ: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟಲು ಕೆಳಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆಯ ನಗರ ಘಟಕದ ರೈತ ಮುಖಂಡರು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರೈತ ಸಂಘದ ಕಾರ್ಯದರ್ಶಿ ಚಂದ್ರಶೇಖರ ಜಾವಗಲ್ ಮಾತನಾಡಿ, ‘ನಗರಕ್ಕೆ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಕೃಷಿ ಜಮೀನುಗಳಿವೆ. ಜಿ.ಎಚ್.ಕಾಲೇಜಿನ ಉತ್ತರ ದಿಕ್ಕಿನ ಕಾಂಪೌಂಡ್ ಪಕ್ಕದಲ್ಲಿ 60 ಅಡಿಯ ಪುರಾತನ ರಸ್ತೆಯಿದ್ದು, ನೇರವಾಗಿ ಸಿದ್ಧಾರೂಢ ಕಾಲೊನಿ ಮುಖಾಂತರ ದೇವಿಹೊಸೂರು ಗ್ರಾಮಕ್ಕೆ ಸಂಪರ್ಕಿಸುತ್ತದೆ. ಇಲ್ಲಿ ಕೆಳಸೇತುವೆ ಇಲ್ಲದ ಕಾರಣ ರೈತರು 10 ಕಿ.ಮೀ. ಬಳಸಿಕೊಂಡು ಹೊಲಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ.
ಅಂಡರ್ ಬ್ರಿಡ್ಜ್ ನಿರ್ಮಿಸದೆ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ಮಾಡಿರುವುದರಿಂದಇಜಾರಿಲಕಮಾಪುರ, ವಿನಾಯಕ ನಗರ, ನೇತಾಜಿ ನಗರ, ಸಿದ್ಧಾರೂಢ ಕಾಲೊನಿಯ ರೈತರಿಗೆ ಕೆಳಸೇತುವೆ ಇಲ್ಲದ ಕಾರಣ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರೈತ ಮುಖಂಡರಾದ ವೀರೇಶ ಜೋಗೂರ, ಸುರೇಶ ಚಲವಾದಿ, ಚಂದ್ರಶೇಖರ ಪಿ.ಜಾವಗಲ್ಲ, ನಾಗಪ್ಪ ಬೂದಿಹಾಳ, ನಿಜಗುಣೆಪ್ಪ ಹಂಚಿನಾಳ, ಮಲ್ಲಪ್ಪ ಡೊಳ್ಳಿನ, ವೀರಣ್ಣ ಕನವಳ್ಳಿ, ಸುರೇಶ ಚಲವಾದಿ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.