
ಬ್ಯಾಡಗಿ: ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿಯಲ್ಲಿ ಎಕ್ಸ್ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ರೈಲ್ವೆ ಕ್ಷೇಮಾಭಿವೃದ್ಧಿ ಹಾಗೂ ಸುಧಾರಣಾ ಸಮಿತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು ದೆಹಲಿಗೆ ತೆರಳಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿಯ ಅಧ್ಯಕ್ಷ ಹಾಗೂ ಮೈಸೂರು ವಿಭಾಗದ ಡಿಆರ್ಯುಸಿಸಿ ಸದಸ್ಯ ಮಾಲತೇಶ ಅರಳಿಮಟ್ಟಿ ಮಾತನಾಡಿ, ‘ಇಲ್ಲಿಯ ಮೆಣಸಿನಕಾಯಿ ವರ್ತಕರು ಹಾಗೂ ಮೆಣಸಿನಕಾಯಿ ಮಾರಾಟಕ್ಕೆ ತರುವ ರೈತರು ದೂರದ ಸ್ಥಳಗಳಿಂದ ಪ್ರಯಾಣಿಸುತ್ತಾರೆ. ಅಗತ್ಯವಿರುವ ಎಕ್ಸ್ಪ್ರೆಸ್ ಗಾಡಿಗಳಾದ ದಾದರ, ಯಶವಂತಪುರ–ವಾಸ್ಕೋ, ರಾಣಿ ಚನ್ನಮ್ಮ, ಜನ ಶತಾಬ್ದಿ ಹಾಗೂ ಬೆಂಗಳೂರ–ಹುಬ್ಬಳ್ಳಿ ವಿಶೇಷ ರೈಲುಗಳನ್ನು ಬ್ಯಾಡಗಿ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು. ಇದರಿಂದ ಸಾವಿರಾರು ಜನರು ಬೆಂಗಳೂರು, ಮುಂಬೈ, ಮಿರಜ, ವಾಸ್ಕೋ ಮುಂತಾದ ಪ್ರಮುಖ ನಗರಗಳನ್ನು ತಲುಪಲು ಅನುಕೂಲವಾಗಲಿದೆ’ ಎಂದರು.
ಸಮಿತಿಯ ಜಂಟಿ ಗೌರವ ಕಾರ್ಯದರ್ಶಿ ಬಸವರಾಜ ಹಂಜಿ ಮಾತನಾಡಿ, ‘ವಾಸ್ಕೋ ಹಾಗೂ ದಾದರ ರೈಲುಗಳು ಸಣ್ಣ ಪುಟ್ಟ ಊರುಗಳಿಗೆ ನಿಲುಗಡೆ ಆಗುತ್ತಿವೆ. ವ್ಯಾಪಾರಿ ಪಡಮೂಲೆಯಂತಿರುವ ಬ್ಯಾಡಗಿಯಲ್ಲಿ ನಿಲುಗಡೆ ಮಾಡಿಸಬೇಕು’ ಎಂದು ಒತ್ತಾಯಿಸಿದರು.
ರಾಣೆಬೆನ್ನೂರು ನೆಹರೂ ಮಾರುಕಟ್ಟೆ ವರ್ತಕರ ಸಂಘದ ನಿರ್ದೇಶಕ ಶಿವಯೋಗಿ ಅಂಗಡಿ ಮಾತನಾಡಿ, ‘ಬ್ಯಾಡಗಿ ಪ್ರಮುಖ ಮೆಣಸಿನಕಾಯಿ ವ್ಯಾಪಾರಿ ಕೇಂದ್ರವಾಗಿದೆ. ವಾರ್ಷಿಕ ₹2 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. ಎಲ್ಲಾ ವೇಗದ ರೈಲುಗಳ ನಿಲುಗಡೆ ಮಾಡುವ ಅಗತ್ಯವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.