ಬಸನಗೌಡ ಪಾಟೀಲ ಯತ್ನಾಳ
ಹಾವೇರಿ: ‘ಜನರು ಹಣ ಪಡೆದು ಮತ ಹಾಕುವುದನ್ನು ನಿಲ್ಲಿಸಬೇಕು. ಹಿಂದೂಗಳ ಪರ ಹೋರಾಡುವ ವ್ಯಕ್ತಿಗೆ ಪಕ್ಷ–ಜಾತಿ ಭೇದ ಮರೆತು ಮತ ಹಾಕಬೇಕು. ಈ ರೀತಿ ಜನರು ಮತ ಹಾಕಿದರೆ, 2028ರಲ್ಲಿ ನಮ್ಮದು ಹಾಗೂ ಕೆ.ಇ. ಕಾಂತೇಶ ಅವರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಕ್ರಾಂತಿವೀರ ಯುವ ಬ್ರಿಗೇಡ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣದ ಅನ್ಯಾಯದ ವಿರುದ್ಧ ನ್ಥಾಯ ಜಾಥಾ’ದಲ್ಲಿ ಪಾಲ್ಗೊಂಡಿದ್ದ ಅವರು, ಹೊಸ ಪಕ್ಷ ಆರಂಭದ ಸುಳಿವು ನೀಡಿದರು.
‘ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗುಣಗಳನ್ನು ಹೊಂದಿರುವ ವ್ಯಕ್ತಿಯೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರತಿಯೊಂದು ಹಳ್ಳಿಗೂ ಹೋಗಿ, ಹಿಂದೂಗಳು ಹಾಗೂ ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ ಜನರನ್ನು ಭೇಟಿಯಾಗುತ್ತಿದ್ದೇನೆ. ಹಿಂದೂ ಧರ್ಮದ ಸಲುವಾಗಿ ಪ್ರಾಣವನ್ನೂ ಕೊಡುವುದಾಗಿ ಎಲ್ಲರೂ ಹೇಳುತ್ತಿದ್ದಾರೆ’ ಎಂದ ಪಾಟೀಲ, ‘ನಿಮ್ಮ ಬೆಂಬಲ ನಮಗೆ ಇರುತ್ತದೆಯಾ’ ಎಂದು ನೆರೆದಿದ್ದವರನ್ನು ಕೇಳಿದರು.
ಕೆಪಿಎಸ್ಸಿಯಲ್ಲಿ ಲಂಚ: ‘ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕನ್ನಡ ಕಲಿತವರಿಗೆ ಅನ್ಯಾಯವಾಗುತ್ತಿದೆ. ಕೆಪಿಎಸ್ಸಿ ಸದಸ್ಯರಾಗಲು ₹ 5 ಕೋಟಿಯಿಂದ 10 ಕೋಟಿ, ಚೇರ್ಮನ್ ಆಗಲು ₹ 50 ಕೋಟಿ, ಉಪ ವಿಭಾಗಾಧಿಕಾರಿ ಹುದ್ದೆಗೆ ₹ 2 ಕೋಟಿ, ಡಿವೈಎಸ್ಪಿ ಹುದ್ದೆಗೆ ₹ 2 ಕೋಟಿ ಹಾಗೂ ಪಿಎಸ್ಐಗೆ ₹ 1 ಕೋಟಿ ಲಂಚ ನೀಡಬೇಕಾದ ಪರಿಸ್ಥಿತಿಯಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.