ADVERTISEMENT

ಮನಸ್ಸು ಕಟ್ಟಲು ಹೇಳಿದ ಶರಣರು: ಪುಷ್ಪಾವತಿ ಶಲವಡಿಮಠ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 2:49 IST
Last Updated 26 ಜುಲೈ 2025, 2:49 IST
ಹಾವೇರಿಯ ಬಸವೇಶ್ವರನಗರದ ಶುಕ್ರವಾರ ಹಮ್ಮಿಕೊಂಡಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮವನ್ನು ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಹಾವೇರಿಯ ಬಸವೇಶ್ವರನಗರದ ಶುಕ್ರವಾರ ಹಮ್ಮಿಕೊಂಡಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮವನ್ನು ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಹಾವೇರಿ: ‘ಸಮಾಜದಲ್ಲಿ ಕೆರೆ, ಕಟ್ಟೆಗಳನ್ನು ಕಟ್ಟುವ ಬದಲು ಮನುಷ್ಯರ ಮನಸ್ಸುಗಳನ್ನು ಕಟ್ಟಬೇಕೆಂದು ಹೇಳಿದವರು ಬಸವಾದಿ ಶರಣರು. ಮನಸ್ಸುಗಳು ಒಂದಾದರೆ, ಜಗತ್ತಿನಲ್ಲಿ ಏನು ಬೇಕಾದರೂ ಕಟ್ಟಬಹುದೆಂಬ ಸಂದೇಶವನ್ನು 12ನೇ ಶತಮಾನದಲ್ಲಿ ತಿಳಿಸಿದ್ದಾರೆ’ ಎಂದು ಚಿಕ್ಕಬಾಸೂರು ಸರ್ಕಾರಿ ಕಾಲೇಜಿನ ಉಪನ್ಯಾಸಕಿ ಪುಷ್ಪಾವತಿ ಶಲವಡಿಮಠ ಹೇಳಿದರು.

ಇಲ್ಲಿಯ ಬಸವೇಶ್ವರನಗರದಲ್ಲಿ ಶ್ರಾವಣ ಮಾಸದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ‘ಮನೆಯಲ್ಲಿ ಮಹಾಮನೆ’ ತಿಂಗಳ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಯಾವುದೇ ಮಠ–ಮಾನ್ಯಗಳು ಇರಲಿಲ್ಲ. ಅಂದಿನ ಶರಣರ ಕೆಲಸವೇ ಮನುಷ್ಯರ ಮನಸ್ಸುಗಳನ್ನು ಕಟ್ಟುವುದಾಗಿತ್ತು. ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಮನಸ್ಸು ಕಟ್ಟುವ ಕೆಲಸವನ್ನು ನಾವೆಲ್ಲರೂ ಮುಂದುವರಿಸಬೇಕಿದೆ’ ಎಂದು ಹೇಳಿದರು.

ADVERTISEMENT

‘ಕಾಯಕ‌ದಿಂದ ಅರಿವಿನ ಜ್ಞಾನ ಪಡೆಯಬಹುದು. ಕಾಯಕವು ಸತ್ಯ ಶುದ್ಧವಾಗಿರಬೇಕು. ಯಾವುದೇ ಪುಕ್ಕಟ್ಟೆ ಸೌಲಭ್ಯ ನಮಗೆ ಬೇಕಿಲ್ಲ. ದೇಶ ಅಭಿವೃದ್ಧಿಯಾಗಬೇಕಾದರೆ, ಪ್ರತಿಯೊಬ್ಬರೂ ದುಡಿಯಬೇಕು. ಒಟ್ಟಿಗೆ ಊಟ ಮಾಡಬೇಕು. ಶ್ರಮದಿಂದ ಮಾಡಿದ ದಾಸೋಹವನ್ನು ಪ್ರಸಾದವೆಂದು ಪವಿತ್ರ ಭಾವದಿಂದ ಸ್ವೀಕರಿಸಬೇಕು’ ಎಂದರು.

‘ಬಸವಾದಿ ಶರಣದ ಅನುಭವ ಮಂಟಪವೇ ಇರಲಿಲ್ಲವೆಂದು ವಾದಿಸುವವರು ಹುಟ್ಟಿಕೊಂಡಿದ್ದಾರೆ. ವಚನ ಸಾಹಿತ್ಯ ತಿರುಚುವ ಕೆಲಸ ನಡೆದಿದೆ. ವಿದ್ಯಾವಂತರಾದ ನಾವೆಲ್ಲರೂ ನಮ್ಮತನಕ್ಕೆ ಚ್ಯುತಿ ಬಂದಾಗ ಒಗ್ಗಟ್ಟಾಗಿ ನಿಲ್ಲಬೇಕಿದೆ. ದೇಹವೇ ದೇವಾಲಯ ಆಗುವ ಪರಿಕಲ್ಪನೆ ತಿಳಿಸಿದ ಶರಣರ ತತ್ವಗಳನ್ನು ಮನೆ ಮನೆಗೂ ತಲುಪಿಸಬೇಕಿದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ‘ವಚನಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ತಿಂಗಳಿಗೆ ಒಂದು ವಚನ ಕಲಿಸಬೇಕು. ಇದರಿಂದ ಮಕ್ಕಳು ಜೀವನಪೂರ್ತಿ ಖುಷಿಯಾಗಿ ಇರುತ್ತಾರೆ‌’ ಎಂದರು.

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಎಲ್ಲ ಪೂಜೆಗಿಂತ ಇಷ್ಟಲಿಂಗ ಪೂಜೆ ಶ್ರೇಷ್ಠ. ಈ ಪೂಜೆ ಮಾಡಿದರೆ ಅಪಮೃತ್ಯಗಳು ದೂರ ಆಗುತ್ತವೆ. ಕಷ್ಟ, ದರಿದ್ರ, ಬಡತನ ತೊಲಗುತ್ತದೆ. ಕಾಯಕ, ದಾಸೋಹ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಸೆಪ್ಟೆಂಬರ್ 14ರಂದು ಬಸವ ಸಂಸ್ಕೃತಿ ಅಭಿಯಾನವಿದ್ದು, ಎಲ್ಲರೂ ಪಾಲ್ಗೊಳ್ಳಬೇಕು’ ಎಂದರು.

ನಿವೃತ್ತ ಗ್ರಂಥಪಾಲಕ ಕೆ.ಎಂ. ವಿಜಾಪುರ, ಬಸವಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಹಂಚಿಗೇರಿ, ಮುರುಗೆಪ್ಪ ಕಡೇಕೊಪ್ಪ, ಜಗದೀಶ ಹರ್ತಿಕೋಟಿ, ಶಿವಯೋಗಿ ಬೆನ್ನೂರ, ಗಂಗಣ್ಣ ಮಾಸೂರು, ಮಾಲತೇಶ ಕರೆಮಣ್ಣನವರ ಇದ್ದರು.

ಶ್ರಾವಣ ಮಾಸದ 30 ದಿನಗಳವರೆಗೆ ನಿತ್ಯವೂ ಒಂದೊಂದು ಮನೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ವಚನ ಸಾಹಿತ್ಯದ ಬಗ್ಗೆ ಉಪನ್ಯಾಸವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.