
ಹಾವೇರಿ: ‘ಸಭಾಪತಿ ಸ್ಥಾನದಲ್ಲಿ ಕುಳಿತವರಿಗೆ ತಾಳ್ಮೆ ಹೆಚ್ಚಿರಬೇಕು. ಹಿಂದೆ ಶಾಸಕರು ಕೈ ಎತ್ತಿ ಮಾತನಾಡಲು ಅವಕಾಶ ಕೇಳುತ್ತಿದ್ದರು. ಈಗ ಕೈ, ಕಾಲು ಇಲ್ಲ. ನಿಂತು ಅವರವರೇ ಮಾತನಾಡುತ್ತಾರೆ. ನಾನು ಮಂಗ್ಯಾನ್ ತರ ಕುಂತಿರುತ್ತೇನೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅನುಭವ ಹಂಚಿಕೊಂಡರು.
ನಗರದಲ್ಲಿ ಮಂಗಳವಾರ ನಡೆದ ‘ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ನನಗೂ ತಾಳ್ಮೆಯಿಂದ ಇದ್ದು ಸಾಕಾಗಿತ್ತು. ‘ದನ ಕಾಯಲು ಹೋಗಿ’ ಎಂದು ಬೈದೆ. ಅಷ್ಟಕ್ಕೆ ಪ್ರಶ್ನಿಸಿದರು. ಅವರಿಗೆ, ನನ್ನ ಮ್ಯಾನೇಜರ್ ಚಿತ್ರೀಕರಿಸಿದ್ದ ದನ ಕಾಯುವವರ ವಿಡಿಯೊ ತೋರಿಸಿ, ‘ಅವರಿಗೂ ನಿಮಗೂ ಏನು ವ್ಯತ್ಯಾಸ? ಎಂದು ಪ್ರಶ್ನಿಸಿದಾಗ ವಾಪಸು ಹೋದರು’ ಎಂದು ಹೇಳಿದರು.
‘ಚುನಾಯಿತರಾದವರು ಸಹ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ. ಮೊನ್ನೆ ಅಧಿವೇಶನ ಮುಗಿಯಲು ಎರಡು ದಿನ ಇತ್ತು. ಪ್ರಶ್ನೆಗೆ ಉತ್ತರ ನೀಡಲು ಇಬ್ಬರು ಸಚಿವರಿಗೆ ಹೇಳಿದ್ದೆ. 15 ದಿನ ಸಮಯ ಕೇಳಿದರು. ಎರಡು ದಿನ ಅಧಿವೇಶನ ಇರುವುದು ಗೊತ್ತಿದ್ದರೂ 15 ದಿನ ಸಮಯ ಕೇಳುವ ಅವರಿಗೆ ಏನು ಹೇಳಲಿ’ ಎಂದು ಪ್ರಶ್ನಿಸಿದರು.