ಹಾವೇರಿ: ‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ದೊಡ್ಡ ಕಂದಕ ನಿರ್ಮಾಣವಾಗಿದೆ. ಒಬ್ಬರ ಮುಖವನ್ನು ಒಬ್ಬರು ನೋಡದಂಥ ಪರಿಸ್ಥಿತಿ ಇದೆ.ಸದ್ಯದಲ್ಲೇ ಸಿದ್ದರಾಮಯ್ಯ ಅವರು ಕಾಂಗ್ರೆಸ್ ತ್ಯಜಿಸಿದರೂ ಆಶ್ಚರ್ಯವಿಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಹಿರೇಕೆರೂರು ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಬುಧವಾರ ಆತ್ಮನಿರ್ಭರ ಯೋಜನೆಯಡಿ ನಿರ್ಮಾಣಗೊಂಡ ಆಹಾರ ಸಂಸ್ಕರಣಾ ಘಟಕ ಉದ್ಘಾಟನೆಗೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಅನ್ನೋದಕ್ಕಿಂತ ನಾನೇ ಸಿಎಂ ಆಗ್ತೀನಿ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ಮತ್ತು ಪಿಸುಮಾತು ಹೇಗೆ ಮತ್ತು ಯಾವಾಗ ಸ್ಫೋಟಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಸಿದ್ದರಾಮಯ್ಯ ಮತ್ತು ಸಿಎಂ ಇಬ್ರಾಹಿಂ ಜಿಗರಿ ದೋಸ್ತರು. ಈಗ ಇಬ್ರಾಹಿಂ ಅವರೇ ಕಾಂಗ್ರೆಸ್ನಿಂದ ಹೊರನಡೆದಿದ್ದಾರೆ.ಇಬ್ರಾಹಿಂ ಸಾಹೇಬ್ರು ಬಹಳ ಚೆನ್ನಾಗಿ ಭಾಷಣ ಮಾಡ್ತಾರೆ,ಪ್ರಾಸಬದ್ಧವಾಗಿ ಮಾತನಾಡುತ್ತಾರೆ. ಆದರೆ,ಜಾತಿಯ (ಅಲಿಂಗ–ಅಲ್ಪ ಸಂಖ್ಯಾತ ಹಾಗೂ ಲಿಂಗಾಯತ) ಆಧಾರದ ಮೇಲೆ ರಾಜಕೀಯ ಮಾಡ್ತೀವಿ ಅನ್ನೋದು ಮೂರ್ಖತನದ ಪರಮಾವಧಿ ಎಂದು ಟೀಕಿಸಿದರು.
ಕೆಲವು ಸಚಿವರು ಪೋನ್ ರಿಸೀವ್ ಮಾಡ್ತಿಲ್ಲ, ದುರಹಂಕಾರಿಗಳಿದ್ದಾರೆ ಅನ್ನೋ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ರೇಣುಕಾಚಾರ್ಯ ಬಹಳ ದೊಡ್ಡವರು. ಯಾವ ಸಚಿವರು ಅಂಥವರಿದ್ದಾರೆ ಎಂಬುದನ್ನು ತಿಳಿಸಬೇಕು.ಸುಮ್ಮನೆ ಕಂಬಳಿಯಲ್ಲಿ ಕಲ್ಲು ಕಟ್ಟಿ ಹೊಡೆಯೋದು ಸರಿಯಲ್ಲ’ ಎಂದು ಬಿ.ಸಿ.ಪಾಟೀಲ ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.