ಹಾವೇರಿ: ‘ಸಿದ್ದರಾಮಯ್ಯನವರು ಬೈದಾಗಲೆಲ್ಲ ನಮಗೆ ಒಳ್ಳೆಯದಾಗಿದೆ. ಅದನ್ನು ನಾನು ಆಶೀರ್ವಾದ ಎಂದುಕೊಂಡಿದ್ದೇನೆ.ನಮ್ಮ ಕ್ಷೇತ್ರಕ್ಕೆ ಬಂದು ಭಾಷಣ ಮಾಡಿ, ಟೀಕಿಸಿದ್ರು. ಉಪಚುನಾವಣೆಯಲ್ಲಿ 10 ಸಾವಿರ ಮತಗಳು ಹೆಚ್ಚಿಗೆ ಬಂದವು’ ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.
ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿ, ‘ನಾವು ಅಂತರಪಿಶಾಚಿಗಳಾಗಿಲ್ಲ. ಎರಡು ಮೂರು ದಿನ ಕಾಯಿರಿ. ಎಲ್ಲವೂ ಸರಿಯಾಗುತ್ತದೆ. ತಿಂಗಳಾಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ವಿಶ್ವನಾಥರಿಗೆ ಸಚಿವ ಸ್ಥಾನ ನೀಡಬೇಡಿ ಎಂದು ಯಾರೂ ಹೇಳಿಲ್ಲ. ಅವರು ಕೇಳಿದ್ದರಲ್ಲಿ ತಪ್ಪೂ ಇಲ್ಲ. ಸೋತವರು–ಗೆದ್ದವರು ಎಂಬ ಪ್ರಶ್ನೆಯೇ ಇಲ್ಲ. ಕೆಲವು ಮಾನದಂಡ ಅನುಸರಿಸಿ ಮುಖ್ಯಮಂತ್ರಿಯವರು ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆ’ ಎಂದರು.
‘ಬಿಜೆಪಿಯಲ್ಲಿ ವಲಸಿಗರು–ಮೂಲ ಎಂಬ ಭೇದಭಾವವಿಲ್ಲ. ಬಿಜೆಪಿ ಸೇರಿದಾಗಿನಿಂದ ನಾವೆಲ್ಲರೂ ಬಿಜೆಪಿಯವರು. ಆಗ 17 ಇದ್ದೆವು. ಈಗ 117 ಆಗಿದ್ದೇವೆ. ನಾನು ಇಂಥದ್ದೇ ಸಚಿವ ಸ್ಥಾನ ಬೇಕು ಅಂತ ಹೇಳಿಲ್ಲ. ಯಾವುದು ಕೊಟ್ಟರೂ ಒಪ್ಪಿಕೊಳ್ಳುತ್ತೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.