ಗುತ್ತಲ: ಇಲ್ಲಿಗೆ ಸಮೀಪದ ಬೆಳವಗಿ ಗ್ರಾಮದ ಬಹುತೇಕ ಕಡೆಗಳಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸದ ಕಾರಣ ಚರಂಡಿಗಳು ಕಸದಿಂದ ತುಂಬಿ ತುಳುಕುತ್ತಿವೆ. ಕೆಲ ಕಡೆಗಳಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸದರೂ ಕಸ ವಿಲೇವಾರಿ ಮಾಡದ ಕಾರಣ ದುರ್ವಾಸನೆ ಬೀರುತ್ತಿದೆ.
ಗ್ರಾಮ ಪಂಚಾಯ್ತಿಯವರು ಬೀದಿದೀಪವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹಲವಾರು ವಿದ್ಯುತ್ ಕಂಬಗಳಲ್ಲಿ ದೀಪಗಳು ಬೆಳಗುತ್ತಿಲ್ಲ. ಕತ್ತಲಲ್ಲಿ ನಡೆದಾಡುವುದು ಅನಿವಾರ್ಯ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ವಿಇವಧ ಕಡೆಗಳಲ್ಲಿ ಚರಂಡಿಗಳು ನಿರ್ಮಾಣವಾಗಬೇಕಿದೆ. ಸಿ.ಸಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕೂಡಲೆ ಗ್ರಾಮ ಪಂಚಾಯ್ತಿಯವರು ಹಾಳಾದ ಸಿ.ಸಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಾಣ ಮಾಡಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.
‘ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಒಂದು ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ಅದೂ ಕೆಟ್ಟು ನಿಂತ ಕಾರಣ ಕುಡಿಯುವ ನೀರಿಗಾಗಿ ನೀರಲಗಿ ಮತ್ತು ಗಳಗನಾಥ ಗ್ರಾಮಕ್ಕೆ ಹೋಗಿ ಶುದ್ಧ ಕುಡಿಯುವ ನೀರನ್ನು ತರಬೇಕಾದ ಅನಿವಾರ್ಯ ಇದೆ. ಕೂಡಲೇ ಗ್ರಾಮ ಪಂಚಾಯ್ತಿಯವರು ಗ್ರಾಮಕ್ಕೆ ಇನ್ನೊಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಚರಂಡಿಗಳಲ್ಲಿ ಮುಳ್ಳಿನ ಗಿಡಗಳ ಬೆಳೆದು ನಿಂತಿದ್ದು, ಅವನ್ನು ಸ್ವಚ್ಛಗೊಳಿಸಬೇಕಿದೆ’ ಎಂದು ಗ್ರಾಮದ ಜನರು ಆಗ್ರಹಪಡಿಸಿದ್ದಾರೆ.
‘ಗ್ರಾಮಕ್ಕೆ ವರದಾನವಾಗಬೇಕಿದ್ದ ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಬರಿದಾಗಿ ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಾರಿ ಬ್ಯಾರೇಜ್ ಗೇಟ್ಗಳನ್ನು ಹಾಕದ ಕಾರಣ ಗ್ರಾಮದ ಸಾವಿರಾರು ರೈತರ ಬೆಳೆಗಳು ನಾಶವಾಗಿವೆ’ ಎಂದು ರೈತರು ಆರೋಪಿಸುತ್ತಾರೆ.
‘ಬ್ಯಾರೇಜ ದುರಸ್ತಿಗಾಗಿ ಸರ್ಕಾರದಿಂದ ₹1 ಕೋಟಿ ಬಿಡುಗಡೆ ಮಾಡಿದರೆ, ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಬ್ಯಾರೇಜ್ ಅಭಿವೃದ್ಧಿ ಕಾಣದೇ ನೂರಾರು ಕೋಟಿ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ’ ಎಂದು ರೈತರು ಅಸಹಾಯಕತೆ ತೋರುತ್ತಾರೆ.
ಶೀಘ್ರವೇ ಚರಂಡಿ ಸ್ವಚ್ಛಗೊಳಿಸಿ ಕಸ ವಿಲೇವಾರಿ ಮಾಡಲಾಗುವುದು. ಬೀದಿದೀಪ ದುರಸ್ತಿ ಮಾಡಲಾಗುವುದು. ಸಿ.ಸಿ ರಸ್ತೆ ಚರಂಡಿ ನಿರ್ಮಾಣ ಮಾಡಲು ಸಭೆ ಕರೆಯಲಾಗುವುದು
–ಬಸವರಡ್ಡಿ ಮಾಡಳ್ಳಿ ಬೆಳವಗಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.