ADVERTISEMENT

ಸೌಹಾರ್ದ ಸಹಕಾರಿ ಕಾಯ್ದೆ ತಿದ್ದುಪಡಿ ಸ್ವಾಗತಾರ್ಹ: ಬಿ.ಎಚ್‌.ಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 10:50 IST
Last Updated 1 ಅಕ್ಟೋಬರ್ 2021, 10:50 IST
ಬಿ.ಎಚ್‌.ಕೃಷ್ಣಾರೆಡ್ಡಿ 
ಬಿ.ಎಚ್‌.ಕೃಷ್ಣಾರೆಡ್ಡಿ    

ಹಾವೇರಿ: ಆದಾಯ ತೆರಿಗೆ ಸಮಸ್ಯೆಗಳ ನಿವಾರಣೆ ಕುರಿತು ಸೌಹಾರ್ದ ಸಹಕಾರಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸ್ವಾಗತಾರ್ಹ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರನ್ನು ಅಭಿನಂದಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್‌.ಕೃಷ್ಣಾರೆಡ್ಡಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸೌಹಾರ್ದ ಸಹಕಾರಿ ಕ್ಷೇತ್ರದ ಮೂಲ ಆಶಯಕ್ಕೆ ಧಕ್ಕೆ ಬರುವ ಹಾಗೆ ಈ ಹಿಂದೆ ತಿದ್ದುಪಡಿಗಳಾಗಿದ್ದವು. ಅದನ್ನು ಸರಿಪಡಿಸುವ ಕೆಲಸ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ರಾಜ್ಯ ಮತ್ತು ಕೇಂದ್ರದ ಎಲ್ಲ ಶಾಸನಗಳಲ್ಲಿ ಸೌಹಾರ್ದ ಸಹಕಾರಿಗಳು ಕೂಡ ಸಹಕಾರ ಸಂಘಗಳೆಂದು ಪರಿಗಣಿಸಲು ತಿದ್ದುಪಡಿಯಾಗಿದೆ ಎಂದರು.

ಪ್ರತ್ಯೇಕ ಸಚಿವಾಲಯ:ಈ ದೇಶದ ಸಹಕಾರ ಚಳವಳಿಗೆ 117 ವರ್ಷಗಳ ಇತಿಹಾಸವಿದೆ. ದೇಶದಲ್ಲಿ 8.5 ಲಕ್ಷ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ಮನವಿಯನ್ನು ಪುರಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಿ, ಪ್ರಭಾವಿ ಸಹಕಾರ ಸಚಿವರನ್ನು ನೇಮಕ ಮಾಡಿದ್ದಾರೆ. ಇದು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಆಶಾದಾಯಕ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

ಕಾರ್ಯಪಡೆ ರಚನೆ:ಯಾವುದೇ ಸೌಹಾರ್ದ ಸಹಕಾರ ಸಂಸ್ಥೆಗಳ ಬಗ್ಗೆ ಠೇವಣಿದಾರರಿಂದ ದೂರ ಸ್ವೀಕೃತವಾದಲ್ಲಿ, ಠೇವಣಿದಾರರಿಗೆ ಹಣ ಕೊಡಿಸುವ ಹಾಗೂ ವಂಚನೆ, ಹಣಕಾಸು ವ್ಯವಹಾರದಲ್ಲಿ ತೊಡಗಿರುವ ಸಹಕಾರಿ ಸಂಸ್ಥೆಗಳ ಮೇಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಉನ್ನತ ಅಧಿಕಾರಿಗಳನ್ನು ಒಳಗೊಂಡ ‘ವಿಶೇಷ ಕಾರ್ಯಪಡೆ’ ಜಾರಿಗೆ ತರಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರಿಯ ನಿರ್ದೇಶಕ ಎಂ.ಬಿ.ಕಲಾಲ್‌, ಕೆ.ಶಿವಲಿಂಗಪ್ಪ, ಎಂ.ಆರ್‌.ಪಾಟೀಲ, ವಸಂತ, ಶ್ರೀಕಾಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.