ಹಾವೇರಿ:ಪ್ರಧಾನಿ ನರೇಂದ್ರ ಮೋದಿಯವರ 2ನೇ ಅವಧಿಯ ಮೊದಲ ವರ್ಷದ ಸಾಧನೆಗಳನ್ನು, ಕೊರೊನಾ ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ನಿಭಾಯಿಸಿದ ರೀತಿ ಮತ್ತು ಆತ್ಮ ನಿರ್ಭರ ಭಾರತದ (₹20 ಲಕ್ಷ ಕೋಟಿ) ಪರಿಕಲ್ಪನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಹಾವೇರಿ ಜಿಲ್ಲಾ ಬಿಜೆಪಿ ಘಟಕವು ಡಿಜಿಟಲ್ ವೇದಿಕೆಯ ಮೂಲಕ ಬುಧವಾರ ರ್ಯಾಲಿ ಆಯೋಜಿಸಿತ್ತು.
ಈ ರ್ಯಾಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಭಾರತ ಆರು ವರ್ಷಗಳ ನರೇಂದ್ರ ಮೋದಿಯವರ ನಾಯಕತ್ವದ ಆಡಳಿತದಲ್ಲಿ ಸಾಧಿಸಿರುವ ಕಾರ್ಯಗಳ ಕುರಿತು ವಿವರಿಸಿದರು. ಕೋವಿಡ್ನಿಂದ ಲಾಕ್ಡೌನ್ ಆಗಿ ಭಾರತ ಅನುಭವಿಸಿರುವ ನಷ್ಟವನ್ನು ಸರಿಪಡಿಸಿಕೊಳ್ಳಲು ₹20 ಲಕ್ಷ ಕೋಟಿ ರೂಗಳ ‘ಆತ್ಮ ನಿರ್ಭರ ಭಾರತ’ ಪ್ಯಾಕೇಜನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ‘ಮೋದಿ ಸರ್ಕಾರ 2ನೇ ಅವಧಿಯ ಮೊದಲ ವರ್ಷದಲ್ಲಿ ಹಾವೇರಿ–ಗದಗ ಲೋಕಸಭಾ ಕ್ಷೇತ್ರಕ್ಕೆ ಮಾಡಿದ ಸಾಧನೆಗಳ ಕುರಿತು ವಿವರಿಸಿದರು.
ಗುತ್ತಲದ ಯುವ ಉದ್ಯಮಿ ಬಸವರಾಜ ಅವರು ಆತ್ಮ ನಿರ್ಭರ ಪ್ಯಾಕೇಜ್ ಕುರಿತಂತೆ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವರು ಉತ್ತರಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಸ್ವಾಗತ ಮತ್ತು ಪರಿಚಯ ಮಾಡಿದರು. ಮೇಘನಾ ಹೆಗಡೆ ‘ವಂದೇ ಮಾತರಂ ಗೀತೆ’ ಹಾಡಿದರು. ವಿಡಿಯೊ ಸಂವಹನದ ಮೂಲಕ ಭಾಗವಹಿಸಿದ್ದ ಕೇಂದ್ರ ಮಂತ್ರಿಗಳು, ಸಂಸದರು ಹಾಗೂ ಕಾರ್ಯಕರ್ತರು ಎದ್ದು ನಿಂತು ಗೌರವ ಸಲ್ಲಿಸಿ ರ್ಯಾಲಿಯ ವಾತಾವರಣವನ್ನು ಮೂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಮುಳ್ಳೂರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.