ಪಡಿತರ ಚೀಟಿ (ಸಾಂಕೇತಿಕ ಚಿತ್ರ)
ಹಾವೇರಿ: ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜಿಲ್ಲೆಯಲ್ಲಿರುವ ಸುಮಾರು 2,000 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದ್ದು, ಅವುಗಳನ್ನು ಎಪಿಎಲ್ ಪಟ್ಟಿಗೆ ಸೇರಿಸಲಾಗಿದೆ.
ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿ ಎದುರು ಎಪಿಎಲ್ಗೆ ಸೇರಿದ ಬಿಪಿಎಲ್ ಚೀಟಿದಾರರ ಹೆಸರುಗಳ ಪಟ್ಟಿಯನ್ನು ಲಗತ್ತಿಸಲಾಗಿದೆ. ಪಟ್ಟಿ ನೋಡಿ ಆತಂಕಗೊಂಡಿರುವ ಪಡಿತರದಾರರು, ತಾವು ಮಾನದಂಡಗಳನ್ನು ಉಲ್ಲಂಘಿಸಿಲ್ಲವೆಂದು ಹೇಳಿ ಆಹಾರ ಇಲಾಖೆಯ ಅಧಿಕಾರಿಗಳ ಎದುರು ಅಳಲು ತೋಡಿಕೊಳ್ಳುತ್ತಿದ್ದಾರೆ.
ವೈಯಕ್ತಿಕ ಉಪಯೋಗಕ್ಕೆ ಕಾರು ಇಟ್ಟುಕೊಂಡಿರುವ, ಜಿಎಸ್ಟಿ ಪಾವತಿಸುವ, ಆದಾಯ ತೆರಿಗೆ ಘೋಷಿಸಿದ ಸೇರಿದಂತೆ ವಿವಿಧ ಕಾರಣದಿಂದಾಗಿ ಬಿಪಿಎಲ್ ಚೀಟಿಗಳನ್ನು ರದ್ದುಪಡಿಸಲಾಗಿದೆ. ಮೂರು ದಿನಗಳ ಹಿಂದೆಯಷ್ಟೇ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಚೀಟಿದಾರರಿಂದ ಆಕ್ಷೇಪಣೆಗಳು ಕೇಳಿಬರುತ್ತಿವೆ.
ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಬಿಪಿಎಲ್ ಚೀಟಿದಾರರಿದ್ದಾರೆ. ಅದರಲ್ಲಿ ಮಾನದಂಡ ಉಲ್ಲಂಘಿಸಿದ್ದ 14,771 ಬಿಪಿಎಲ್ ಚೀಟಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಚೀಟಿದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಾನದಂಡಗಳನ್ನು ಶೇ 100ರಷ್ಟು ಉಲ್ಲಂಘಿಸಿದ ಸುಮಾರು 2 ಸಾವಿರ ಬಿಪಿಎಲ್ ಚೀಟಿಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಉಳಿದ ಚೀಟಿದಾರರ, ಪರಿಶೀಲನೆ ಮುಂದುವರಿದಿದೆ.
‘ವಾರ್ಷಿಕ ಆದಾಯ, ಆದಾಯ ತೆರಿಗೆ ಪಾವತಿ, ವಾರ್ಷಿಕ ₹ 25 ಲಕ್ಷಕ್ಕಿಂತ ಹೆಚ್ಚು ವಹಿವಾಟು, ಸರ್ಕಾರಿ, ಅರೆ ಸರ್ಕಾರಿ ನೌಕರಿಯಲ್ಲಿರುವವರು, 7 ಎಕರೆ 20 ಗುಂಟೆಗಿಂತ ಹೆಚ್ಚಿನ ಜಮೀನು ಹೊಂದಿರುವ ಬಿಪಿಎಲ್ ಚೀಟಿಗಳನ್ನು, ಎಪಿಎಲ್ ಆಗಿ ಪರಿವರ್ತಿಸಲಾಗುತ್ತಿದೆ’ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ತಿಳಿಸಿದರು.
‘ಮಾನದಂಡ ಪಾಲಿಸಿದವರು ಆತಂಕಪಡುವ ಅಗತ್ಯವಿಲ್ಲ. ಪರಿಶೀಲನೆ ನಡೆಸಿದ ಮೇಲೆಯೇ ಚೀಟಿಗಳನ್ನು ಪರಿವರ್ತಿಸಲಾಗುವುದು. ಪರಿಶೀಲನೆಯಲ್ಲಿ ಉಲ್ಲಂಘನೆ ಕಂಡುಬರದಿದ್ದರೆ, ಚೀಟಿಗಳನ್ನು ಮುಂದುವರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.