ಹಾವೇರಿ: ಮನೆಯ ಜಿಪಿಎಸ್ ಮಾಡಿಸಿಕೊಡಲು ಫಲಾನುಭವಿಯೊಬ್ಬರಿಂದ ₹20 ಸಾವಿರ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸವಣೂರು ತಾಲ್ಲೂಕಿನ ಕಾರಡಗಿ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಜಾಫರ್ ಸಂಶಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಲಂಚದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಯಿಂದ ಕಾರಡಗಿ ಗ್ರಾಮದ ದಾದಾಪೀರ್ ಮಹಮ್ಮದ್ಗೌಸ್ ಲೋಹಾರ ಅವರ ಮನೆ ತೀವ್ರ ಹಾನಿಯಾಗಿತ್ತು. ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ₹5 ಲಕ್ಷ ನೆರೆ ಪರಿಹಾರ ಮಂಜೂರಾಗಿತ್ತು. ಮನೆಯ ಜಿಪಿಎಸ್ ಮಾಡಿಸಿಕೊಡಲು ₹1 ಲಕ್ಷ ಕೊಡುವಂತೆ ಗ್ರಾ.ಪಂ. ಸದಸ್ಯ ಮಹಮ್ಮದ್ ಜಾಫರ್ ಸಂಶಿ ಬೇಡಿಕೆ ಇಟ್ಟಿದ್ದರು.
ಫಲಾನುಭವಿ ಒಪ್ಪದಿದ್ದಾಗ ಅಂತಿಮವಾಗಿ ₹40 ಸಾವಿರ ಲಂಚ ನೀಡುವಂತೆ ಒತ್ತಡ ಹೇರಿದ್ದರು. ಲಂಚ ಕೊಡದಿದ್ದರೆ ಪಿಡಿಒ ಅವರಿಗೆ ಹೇಳಿ ಮಂಜೂರಾದ ಮನೆಯನ್ನು ರದ್ದುಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಲೋಕಾಯುಕ್ತ ಪೊಲೀಸರಿಗೆ ದಾದಾಪೀರ್ ದೂರು ಸಲ್ಲಿಸಿದ್ದರು.
ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.