
ಹಾವೇರಿ: ನಗರದಲ್ಲಿ ಕ್ಲಿನಿಕ್ ನಡೆಸಲು ಅಗತ್ಯವಿದ್ದ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಪ್ರಮಾಣ ಪತ್ರ (ಬಿಎಂಡಬ್ಲ್ಯು) ನೀಡಲು ₹ 10 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಡಾಟಾ ಎಂಟ್ರಿ ಆಪರೇಟರ್ ಸವಿತಾ ಬೆಳ್ಳಿಗಟ್ಟಿ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಾವೇರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸವಿತಾ ಅವರನ್ನು ₹ 6,000 ಲಂಚ ಪಡೆಯುವಾಗ ಪುರಾವೆ ಸಮೇತ ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
‘ಡಾ. ನಿಖಿಲ್ ಎ.ಎಚ್. ಎಂಬುವವರು ಹಾವೇರಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಬಿಎಂಡಬ್ಲ್ಯು ಪ್ರಮಾಣ ಪತ್ರಕ್ಕಾಗಿ ಅವರು ಮಂಡಳಿಯ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಪ್ರಮಾಣ ಪತ್ರ ನೀಡಲು ಆರೋಪಿ ₹ 10,000 ಲಂಚ ಕೇಳಿದ್ದರು. ಅದೇ ವಿಷಯವನ್ನು ನಿಖಿಲ್ ಅವರು ಸಹೋದರ ನವೀನ್ ಅವರಿಗೆ ತಿಳಿಸಿದ್ದರು. ನವೀನ್ ಅವರು ನಮಗೆ ದೂರು ನೀಡಿದ್ದರು’ ಎಂದಿದ್ದಾರೆ.
‘ದೂರಿನ ಅನ್ವಯ ಪುರಾವೆ ಸಮೇತ ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಯಿತು. ದೂರುದಾರರಿಂದ ₹ 6,000 ಲಂಚ ಪಡೆಯುತ್ತಿದ್ದಂತೆ ದಾಳಿ ಮಾಡಿ, ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ನಂತರ, ಕಚೇರಿಯಲ್ಲಿ ತಪಾಸಣೆ ನಡೆಸಲಾಯಿತು’ ಎಂದು ತಿಳಿಸಿದ್ದಾರೆ.
ಡಿವೈಎಸ್ಪಿ ಮದುಸೂಧನ್ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆಸಿದೆ. ಮಂಡಳಿಯ ಕೆಲ ಅಧಿಕಾರಿಗಳ ಅಣತಿಯಂತೆ ಆರೋಪಿ ಸವಿತಾ ಲಂಚಕ್ಕೆ ಬೇಡಿಕೆ ಇರಿಸಿದ್ದರೆಂಬ ಆರೋಪವಿದ್ದು, ಈ ಬಗ್ಗೆಯೂ ಲೋಕಾಯುಕ್ತ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.