ಬ್ಯಾಡಗಿ: ಪಟ್ಟಣದ ಅಗಸನಹಳ್ಳಿಯಲ್ಲಿ ಹಿಂದೂ ರಾಷ್ಟ್ರ ಸ್ವಯಂ ಸೇವಾ ಸಂಘ ಪ್ರತಿಷ್ಠಾಪಿಸಿದ ‘ಬ್ಯಾಡಗಿ ಕಾ ರಾಜಾ‘ ಗಣೇಶ ಮೂರ್ತಿಯ ವಿಸರ್ಜನೆ ಶನಿವಾರ ಸಂಜೆ ಸಡಗರದಿಂದ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಜಾಂಝ್, ನಂದಿಕೋಲು, ಕೀಲು ಕುದುರೆ ಸೇರಿ ಅನೇಕ ಸಾಂಪ್ರದಾಯಿಕ ವಾದ್ಯಗಳನ್ನು ಬಳಸಲಾಗಿತ್ತು. ಬೆಳಿಗ್ಗೆ ಮೋದಕ ಪ್ರಿಯನಿಗೆ ಪೂಜೆಗಳನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು. ಡಿಜೆ ತರುವ ಮನ್ಸೂಚನೆ ಅರಿತಿದ್ದ ಜನರು ರಸ್ತೆ ಬದಿಯಲ್ಲಿ ನಿಂತು ಗಣೇಶನ ಅದ್ದೂರಿ ಮೆರವಣಿಗೆಯ ಬರುವಿಕೆಗಾಗಿ ಕಾಯ್ದು ಕುಳಿತಿದ್ದರು. ಸಂಜೆ ಡಿಜೆ ಸದ್ದಿನೊಂದಿಗೆ ಆರಂಭವಾದ ಮೆರವಣಿಗೆ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಜೋಗ ಜಲಪಾತದ ರೀತಿಯಲ್ಲಿ ನಿರ್ಮಿಸಿದ ಪಟಾಕಿ ಹಾಗೂ ವಿವಿಧ ರೀತಿಯ ವಿದ್ಯುತ್ ದೀಪಗಳ ದೃಶ್ಯಾವಳಿಯೊಂದಿಗೆ ರಾತ್ರಿ 10 ಕ್ಕೆ ಸಂಪನ್ನಗೊಂಡಿತು.
ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕರು : ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಯುವಕರ ಗುಂಪು ಡಿಜೆ ಸದ್ದಿಗೆ ಹೆಜ್ಜೆ ಹಾಕುವುದರಲ್ಲಿ ನಿರತವಾಗಿತ್ತು. ಸುಮಾರು ಎರಡು ಕಿ.ಮೀ ಸಾಗಿದ ಮೆರವಣಿಗೆಯಲ್ಲಿ ವಿವಿಧ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಯುವಕರು ಮಕ್ಕಳೂ ಸಹ ಸಂಭ್ರಮಿಸಿದರು. ಮೆರವಣಿಗೆ ಅಗಸನಹಳ್ಳಿಯಿಂದ ಹಂಸಭಾವಿ ರಸ್ತೆಯ ಮೂಲಕ ಹಾಯ್ದು ಮುಖ್ಯ ರಸ್ತೆಯನ್ನು ಪ್ರವೇಶಿಸಿತು. ಅಲ್ಲಿಂದ ಸುಮಾರು ಒಂದೂವರೆ ಗಂಟೆ ಮೆರವಣೆಗೆ ಸಾಗಿತು. ದಾರಿಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗಣೇಶನಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸುವ ದೃಶ್ಯಗಳು ಕಂಡು ಬಂತು.
ಪೊಲೀಸ್ ಬಂದೋಬಸ್ತ್ : ಐದು ಗಂಟೆಯವರೆಗೆ ನಿರಂತರವಾಗಿ ನಡೆದ ಮೆರವಣಿಗೆ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಆಯ್ದ ಸ್ಥಳಗಳಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.
ಗಣೇಶನಿಗೆ ವಿದಾಯ: ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆಯಿಂದ ವಿವಿಧ ರೀತಿಯ ಪ್ರಕಾಶಮಾನವಾದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತು. ಅದನ್ನು ವೀಕ್ಷಿಸಲು ಸಾವಿರಾರು ಜನರು ಜಮಾಯಿಸಿದ್ದರು.
ರಾತ್ರಿ 9.30ಕ್ಕೆ ಗಣೇಶ ಮೂರ್ತಿಯನ್ನು ಸ್ಥಳಕ್ಕೆ ಬರುತ್ತಿದ್ದಂತೆ ಹಿಂದೂ ಪರ ಘೋಷಣೆಗಳು ಹಾಗೂ ಗಣೇಶನಿಗೆ ಜೈಕಾರದ ಘೋಷಣೆಗಳು ಮೊಳಗಿದವು. ಶಾಂತ ರೀತಿಯಲ್ಲಿ ಜನರು ವಿದ್ಯುತ್ ದೀಪಗಳ ಅಲಂಕಾರ ಹಾಗೂ ಪಟಾಕಿ ಸಿಡಿಯುವುದನ್ನು ವೀಕ್ಷಿಸಿ ಕಣ್ತುಂಬಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.