ಹಾವೇರಿ: ಮಹಿಳೆಯೊಬ್ಬರ ಮೇಲೆ ಆಸಿಡ್ ಎರಚಿದ್ದ ಪ್ರಕರಣದ ಅಪರಾಧಿ ಪ್ರಸಾದ ಉರುಫ್ ಪ್ರಶಾಂತ ಚಿಕ್ಕಳ್ಳಿ ಎಂಬಾತನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
2020ರ ಜನವರಿ 28ರಂದು ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ನಿಂಗೌಡ ಪಾಟೀಲ ನಡೆಸಿದರು.
ಹಾವೇರಿಯ ಜೈ ಕರ್ನಾಟಕ ಎಂಜಿನಿಯರಿಂಗ್ ವರ್ಕ್ಸ್ ಅಂಗಡಿಯ ಮುಂದೆ ಹೊರಟಿದ್ದ ಮಹಿಳೆ ಮೇಲೆ ಆಸಿಡ್ ಎರಚಿ ಕೊಲೆಗೆ ಯತ್ನಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಮಹಿಳೆ, ಹಾವೇರಿ ಮಹಿಳಾ ಠಾಣೆಗೆ ದೂರು ನೀಡಿದ್ದರು. ಆರೋಪಿ ಪ್ರಸಾದ್ನನ್ನು ಬಂಧಿಸಿದ್ದ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಮಂಜಣ್ಣ ಟಿ. ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
‘ಆರೋಪಿ ಪ್ರಸಾದ್ ಮೇಲಿನ ಆರೋಪಗಳು ಸಾಬೀತಾಗಿವೆ. ಹೀಗಾಗಿ, ಅಪರಾಧಿಯೆಂದು ಪರಿಗಣಿಸಿ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 1.70 ಲಕ್ಷ ದಂಡವನ್ನೂ ವಿಧಿಸಲಾಗಿದೆ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿಜಯಕುಮಾರ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.