
ರಾಣೆಬೆನ್ನೂರು ತಾಲ್ಲೂಕಿನ ಕಮದೋಡ ಗ್ರಾಮದಲ್ಲಿ ಚಂದ್ರಗುತ್ತೆಮ್ಮದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವು ಹುಣಸಿಕಟ್ಟಿ ಸಿದ್ದಾಶ್ರಮದ ಗುರು ಜಯಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿತು
ರಾಣೆಬೆನ್ನೂರು: ‘ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಯುವಕರು ಶ್ರದ್ಧೆ, ಭಕ್ತಿಯಿಂದ ಸನ್ಮಾರ್ಗದಲ್ಲಿ ಸಾಗಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ‘ ಎಂದು ಹುಣಸಿಕಟ್ಟಿ ಸಿದ್ದಾಶ್ರಮದ ಗುರು ಜಯಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಮದೋಡ ಗ್ರಾಮದ ತಳವಾರ (ವಾಲ್ಮೀಕಿ ನಗರ) ಓಣಿಯಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿದ ಚಂದ್ರಗುತ್ತೆಮ್ಮದೇವಿ ದೇವಸ್ಥಾನ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಯುವಕರು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಭಕ್ತಿ ಭಾವದಿಂದ ನಡೆದುಕೊಳ್ಳಬೇಕು. ನೂತನ ದೇವಸ್ಥಾನ ನಿರ್ಮಾಣದಿಂದ ಗ್ರಾಮಸ್ಥರಿಗೆ ಶಾಂತಿ ನೆಮ್ಮದಿ, ದೊರಕಲಿ. ಪ್ರತಿ ವರ್ಷ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ರೈತನ ಕೈ ಸೇರಲಿ’ ಎಂದರು.
ಮೆರವಣಿಗೆ: ಗುರುವಾರ ದೇವಿಯ ಮೂರ್ತಿ ಮೆರವಣಿಗೆ ಅಂಗವಾಗಿ ಗ್ರಾಮದ ತುಂಬೆಲ್ಲ ಅಂಗಳಕ್ಕೆ ನೀರು ಹಾಕಿ, ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ ಸಿಂಗರಿಸಲಾಗಿತ್ತು. ನೂತನ ದೇವಿ ಮೂರ್ತಿಯ ಮೆರವಣಿಗೆಯು ಸಕಲ ವಾದ್ಯಗಳೊಂದಿಗೆ ದೇವಸ್ಥಾನ ತಲುಪಿತು. ‘ಚಂದ್ರಗುತ್ತೆಮ್ಮ ನಿನ್ನಾಲ್ಕು ಉದೋ ಉದೋ’ ಎಂದು ಭಕ್ತರ ಜೈಘೋಷ ಮೊಳಗಿತು. ಭಕ್ತರು ದಾರಿಯುದ್ದಕ್ಕೂ ಹಣ್ಣು, ಕಾಯಿ ನೈವೇದ್ಯ ಅರ್ಪಿಸಿದರು. ಮಹಿಳೆಯರು ಛತ್ರ ಚಾಮರ ಬೀಸಿದರು.
ಶುಕ್ರವಾರ ಬೆಳಗಿನ ಬ್ರಾಹ್ಮಿ ಮಹೂರ್ತದಲ್ಲಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಹೋಮ, ಹವನ ಪೂಜೆ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿದವು. ನಂತರ ದೇವಿಗೆ ಏಕಾದಶ ಅಭಿಷೇಕ, ಕೂಷ್ಮಂಡ ಕದಳಿ ಬಲಪೂಜೆ, ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನಡೆಯಿತು.
ದೇವಸ್ಥಾನಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಗ್ರಾಮದ ಮುಖಂಡರನ್ನು ಗೌರವಿಸಲಾಯಿತು. ಗಣೇಶ ಕುಂಟೇರ, ಹನುಮಂತ ತಳವಾರ, ಹನುಮಂತ ಆರ್.ಆರ್, ಉಮೇಶ ಕುಂಟೇರ, ಧರ್ಮಪ್ಪ, ಉಮೇಶ, ನಾಗರಾಜ, ಗಣೇಶ, ಹನುಮಂತಪ್ಪ ನಾಗಪ್ಪ ತಳವಾರ, ಚದ್ರಪ್ಪ ಬಿಳಸೂನೂರ, ಹೊನ್ನಪ್ಪ ತಳವಾರ, ಕುಮಾರ ಜೆಸಿಬಿ, ಹನುಮಂತಪ್ಪ ಬಸಪ್ಪ ಕುಂಟೇರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.