ADVERTISEMENT

ಕೆಸಿಸಿ ಬ್ಯಾಂಕಿನ ವ್ಯವಸ್ಥಾಪಕ ಸೇರಿ ಮೂವರ ಅಮಾನತು: ಆಡಿಟ್‌ ತಂಡ ಭೇಟಿ ಇಂದು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 4:31 IST
Last Updated 1 ಡಿಸೆಂಬರ್ 2022, 4:31 IST
ಚಿಕ್ಕೇರೂರು ಗ್ರಾಮದಲ್ಲಿ ರೈತರ ಹೆಸರಿನಲ್ಲಿ ಕೆಸಿಸಿ ಬ್ಯಾಂಕ್ ಮ್ಯಾನೇಜರ್‌ ನಿಂದ ಕೋಟ್ಯಂತರ ರೂಪಾಯಿ ಅವ್ಯವಹಾರದ ಮೋಸಕ್ಕೆ ಒಳಗಾದವರು  -ಪ್ರಜಾವಾಣಿ ಚಿತ್ರ
ಚಿಕ್ಕೇರೂರು ಗ್ರಾಮದಲ್ಲಿ ರೈತರ ಹೆಸರಿನಲ್ಲಿ ಕೆಸಿಸಿ ಬ್ಯಾಂಕ್ ಮ್ಯಾನೇಜರ್‌ ನಿಂದ ಕೋಟ್ಯಂತರ ರೂಪಾಯಿ ಅವ್ಯವಹಾರದ ಮೋಸಕ್ಕೆ ಒಳಗಾದವರು  -ಪ್ರಜಾವಾಣಿ ಚಿತ್ರ   

ಹಿರೇಕೆರೂರು: ರೈತರ ಹೆಸರಿನಲ್ಲಿ ಚಿಕ್ಕೇರೂರು ಕೆಸಿಸಿ ಬ್ಯಾಂಕಿನಲ್ಲಿ ಎರಡೂವರೆ ಕೋಟಿಗಿಂತಲೂ ಹೆಚ್ಚು ಹಣ ದುರಪಯೋಗವಾಗಿರುವ ಆರೋಪ ಕೇಳಿ ಬಂದಿದೆ.

ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಇರುವ ಕೆಸಿಸಿ ಬ್ಯಾಂಕಿನ ಮ್ಯಾನೇಜರ್ ಆರ್.ವಿ. ಪಾಟೀಲ, ಸಬ್ ಅಕೌಂಟೆಂಟ್ ಉಮಾ ಹಾಗೂ ಪಿಗ್ಮಿ ಕಲೆಕ್ಟರ್ ಚನ್ನವೀರಸ್ವಾಮಿ ಅವರು ರೈತರ ಹಾಗೂ ಸಾಮಾನ್ಯ ಜನರ ಆಧಾರ್‌ ಕಾರ್ಡುಗಳನ್ನು ಬಳಸಿಕೊಂಡು ಸುಮಾರು 88 ಜನರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದರೆ ಎನ್ನಲಾಗಿದೆ.ಸದ್ಯ ಈ ಮೂವರನ್ನು ಅಮಾನತು ಮಾಡಲಾಗಿದೆ.

ಬ್ಯಾಂಕ್ ಮ್ಯಾನೇಜರ್ ಆರ್.ವಿ. ಪಾಟೀಲ 2013ರಿಂದ 2022ರ ಜುಲೈವರಗೆ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಗುರುವಾರ ಕೆಸಿಸಿ ಪ್ರಧಾನ ಕಚೇರಿಯಾದ ಧಾರವಾಡದಿಂದ ಹಿರಿಯ ಅಧಿಕಾರಿಗಳು ಬರುತ್ತಿದ್ದು, ಗುರುವಾರದಿಂದ ಬ್ಯಾಂಕಿನ ವ್ಯವಹಾರದ ಬಗ್ಗೆ ಲೆಕ್ಕಪರಿಶೋಧನೆ (ಆಡಿಟ್‌) ಮಾಡಲಿದ್ದಾರೆ.

ADVERTISEMENT

‘ನಾನು ಜುಲೈ ತಿಂಗಳಲ್ಲಿ ವರ್ಗಾವಣೆ ಆಗಿ ಚಿಕ್ಕೇರೂರು ಬ್ಯಾಂಕ್ ಗೆ ಬಂದಿದ್ದೇನೆ. ನನಗೆ ಪೂರ್ಣ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರವನ್ನು ಹಿಂದಿನ ಮ್ಯಾನೇಜರ್ ಕೊಟ್ಟಿಲ್ಲ. ಬ್ಯಾಂಕಿನಲ್ಲಿ ನಡೆದ ಅವ್ಯವಹಾರದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಬ್ಯಾಂಕ್‌ ಮ್ಯಾನೇಜರ್‌ ಶೇಖಪ್ಪ ಗಂಟೇರ ತಿಳಿಸಿದರು.

ಕರವೇ ಪ್ರತಿಭಟನೆ:

ವಿಷಯ ತಿಳಿದ ಕೂಡಲೇ ಬ್ಯಾಂಕಿ ಬಳಿ ಬಂದ ಕಾರ್ಯಕರ್ತರು ಹಾಗೂ ಹೆಸರಿನಲ್ಲಿ ಸಾಲ ತೆಗೆದುಕೊಂಡವರು ಬಂದು ಪ್ರತಿಭಟನೆ ನಡೆಸಿದರು.

ಕರವೇ (ಪ್ರವೀಣ ಶೆಟ್ಟಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಭರಮಪ್ಪ ಡಮ್ಮಳ್ಳಿ ಮಾತನಾಡಿ, ಗ್ರಾಹಕರು ಅಕೌಂಟ್ ತೆರೆಯಲು ಹೋದರೆ ಅವರ ಆಧಾರ್ ಕಾರ್ಡ್ ಪಡೆದು, ಗ್ರಾಹಕರ ಹೆಸರಿನಲ್ಲಿ ಹಣವನ್ನು ಲಪಟಾಯಿಸಿದ್ದಾರೆ. ಈಗ ಗ್ರಾಹಕರು ಬೇರೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಹೋದಾಗ ತಮ್ಮ ಆಧಾರ್ ಕಾರ್ಡಿನ ಸಿವಿಲ್ ತೆಗೆದಾಗ ತಮ್ಮ ಆಧಾರ್‌ ಕಾರ್ಡ್‌ ಮುಖಾಂತರ ಲಕ್ಷಾಂತರ ರೂಪಾಯಿ ಹಣವನ್ನು ಪ್ರತಿ ಗ್ರಾಹಕರ ಮೇಲೆ ಸಾಲವನ್ನಾಗಿ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದು ಹೇಳಿದರು.

‘ಇದುವರೆಗೂ ಗ್ರಾಹಕರು ಮೇಲಧಿಕಾರಿಗಳಿಗೆ ಅರ್ಜಿ ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈಗಾಗಲೇ
ಸುಮಾರು 150ಕ್ಕೂ ಹೆಚ್ಚು ಗ್ರಾಹಕರಿಗೆ ಅನ್ಯಾಯವಾಗಿದ್ದು ಈ ವಿಷಯ ಪ್ರಧಾನ ವ್ಯವಸ್ಥಾಪಕರ ಕಛೇರಿಗೂ ಗಮನಕ್ಕೆ ತರಲಾಗಿದೆ’ ಎಂದರು.

ತೌಫಿಕ್ ಚಿಕ್ಕೋಣತಿ, ಜಮೀರ್ ಚಿಕ್ಕೋಣತಿ, ಇರ್ಫಾನ್ ಮಕಾದಾರ್,ಗುರುರಾಜ,ರವಿ ದೇವಗಿರಿ,ನಾಗರಾಜ ನೂಲಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.