ADVERTISEMENT

ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವಕಾಶ: ಓಲೇಕಾರಗೆ ಸಿಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 11:38 IST
Last Updated 6 ಆಗಸ್ಟ್ 2021, 11:38 IST
ಹಾವೇರಿ ಶಾಸಕ ನೆಹರು ಓಲೇಕಾರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಶುಕ್ರವಾರ ದೂರವಾಣಿ ಮೂಲಕ ಮಾತನಾಡಿದ ದೃಶ್ಯ. ಸಚಿವ ಬಿ.ಸಿ.ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಇದ್ದಾರೆ  –ಪ್ರಜಾವಾಣಿ ಚಿತ್ರ 
ಹಾವೇರಿ ಶಾಸಕ ನೆಹರು ಓಲೇಕಾರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಶುಕ್ರವಾರ ದೂರವಾಣಿ ಮೂಲಕ ಮಾತನಾಡಿದ ದೃಶ್ಯ. ಸಚಿವ ಬಿ.ಸಿ.ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಇದ್ದಾರೆ  –ಪ್ರಜಾವಾಣಿ ಚಿತ್ರ    

ಹಾವೇರಿ: ಸಚಿವ ಸ್ಥಾನ ಸಿಕ್ಕಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ನೆಹರು ಓಲೇಕಾರ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಕರೆ ಮಾಡಿ, ಮುಂದಿನ ಸಂಪುಟ ವಿಸ್ತರಣೆಯಲ್ಲಿ ನಿಮಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡುವ ಮೂಲಕ ಶಾಸಕರ ಮನವೊಲಿಸಿದರು.

ನಗರದಲ್ಲಿರುವ ಶಾಸಕ ನೆಹರು ಓಲೇಕಾರ ಅವರ ಮನೆಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ ಅವರು ಉಪಾಹಾರ ಸೇವಿಸಿ, ಗೋಪ್ಯ ಮಾತುಕತೆ ನಡೆಸಿದರು. ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ನಂತರ ಮುಖ್ಯಮಂತ್ರಿಗೆ ದೂರವಾಣಿ ಕರೆ ಮಾಡಿ, ಶಾಸಕ ನೆಹರು ಓಲೇಕಾರ ಅವರೊಂದಿಗೆ ಮಾತನಾಡಿಸಿದರು.

ನಂತರ ಶಾಸಕ ನೆಹರು ಓಲೇಕಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಅನ್ಯಾಯವಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಮುಂದೆ ಅವಕಾಶ ಮಾಡಿಕೊಡುತ್ತೇನೆ, ಸಹಕಾರ ನೀಡಿ ಎಂದು ಮುಖ್ಯಮಂತ್ರಿ ಕೇಳಿಕೊಂಡಿದ್ದಾರೆ. ಮೊದಲಿನಿಂದಲೂ ನಾನು ಸಹಕಾರ ನೀಡುತ್ತಲೇ ಬಂದಿದ್ದೇನೆ. ಸಿ.ಎಂ ಮತ್ತು ನಾನು ಸವಣೂರು ಕ್ಷೇತ್ರವನ್ನು ಹಂಚಿಕೊಂಡಿದ್ದರೂ ಯಾವುದೇ ವಿವಾದ, ಭಿನ್ನಾಭಿಪ್ರಾಯ ಇದುವರೆಗೂ ಬಂದಿಲ್ಲ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ 46 ಲಕ್ಷ ಚಲವಾದಿ ಸಮುದಾಯವಿದ್ದರೂ, ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ನೀಡದ ಕಾರಣ ಬೇಸರವಾಗಿತ್ತು. ಈಗ ಮುಖ್ಯಮಂತ್ರಿಯವರೇ ಅನ್ಯಾಯ ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆ. ಬಲಗೈ ಸಮುದಾಯಕ್ಕೆ ಸ್ಥಾನ ಕಲ್ಪಿಸಿಲ್ಲ ಎಂಬ ಕೊರಗು ನನಗೂ ಇದೆ ಎಂದು ಬೊಮ್ಮಾಯಿಯವರೇ ಹೇಳಿದರು. ಹೀಗಾಗಿ, ಕಾಯುವುದು ಅನಿವಾರ್ಯ’ ಎಂದು ಶಾಸಕ ಓಲೇಕಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.