ಹಾವೇರಿ:ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಮನುಷ್ಯ-ಮನಸ್ಸುಗಳ ಮಧ್ಯೆ ಅಶಾಂತಿ ಸೃಷ್ಟಿ ಮಾಡಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದಮಕರವಳ್ಳಿ ಮತ್ತು ಹೊಂಕಣ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಾತಿ-ಜಾತಿಗಳ ನಡುವೆ ದ್ವೇಷವನ್ನು ಬಿತ್ತಿ, ಜಾತಿಗಳಲ್ಲಿ ನೂರಾರು ಉಪಜಾತಿಗಳನ್ನು ಸೃಷ್ಟಿ ಮಾಡಿ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದಾರೆ. ಮನಸುಗಳ ಮಧ್ಯೆ ಗೋಡೆಯನ್ನು ಸೃಷ್ಟಿ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕು ಹಾಕಿ ಕಮಲದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ 2023ರ ಚುನಾವಣೆಗೆ ಇಲ್ಲಿನ ಮತದಾರರು ಮುನ್ನಡೆ ಬರೆಯಲಿದ್ದಾರೆ ಎಂದರು.
ಇತ್ತೀಚಿಗೆ ವಿಧಾನಸೌಧಕ್ಕೆ ಸಿದ್ದರಾಮಯ್ಯನವರು ಹಾಗೂ ಡಿ.ಕೆ. ಶಿವಕುಮಾರ್ ಚಕ್ಕಡಿ ಏರಿ ಬಂದಿದ್ದರು. ಹಗ್ಗ ಸಿದ್ದರಾಮಯ್ಯ ಕೈಯ್ಯಲ್ಲಿತ್ತು, ಬಾರುಕೋಲು ಡಿಕೆಶಿ ಕೈಯಲ್ಲಿತ್ತು. ಇವರಿಬ್ಬರ ಎಳೆದಾಟದಲ್ಲಿ ಚಕ್ಕಡಿಯಲ್ಲಿ ಇದ್ದ ಶಾಸಕರು ಕೆಳಗೆ ದಬದಬನೆ ಕೆಳಗೆ ಬಿದ್ದರು. ಇದೇ ರೀತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 2023ರ ಚುನಾವಣೆಯಲ್ಲಿ ದಬದಬನೇ ಬೀಳುತ್ತಾರೆ. ಇದು ಟ್ರೇಲರ್ ಮಾತ್ರ. ಹಾನಗಲ್ ಕ್ಷೇತ್ರದಿಂದ ಕಾಂಗ್ರೆಸ್ ಸೋಲು ಆರಂಭವಾಗಲಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.