ADVERTISEMENT

ಸರ್ಕಾರದ ಸಾಧನಾ ಸಮಾವೇಶ ಫೆ. 14ರಂದು: ಸಚಿವ ಶಿವಾನಂದ ಪಾಟೀಲ

ಹಾವೇರಿ ಹೊರವಲಯದ ಜಾಗದಲ್ಲಿ ಸಮಾವೇಶ, ಮುಖ್ಯಮಂತ್ರಿ ಸಮಯ ಸಿಗದಿದ್ದಕ್ಕೆ ಒಂದು ದಿನ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:16 IST
Last Updated 7 ಫೆಬ್ರುವರಿ 2026, 4:16 IST
ಹಾವೇರಿಯಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಜಾಗಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಚಿವ ಶಿವಾನಂದ ಪಾಟೀಲ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರಿಂದ ಮಾಹಿತಿ ಪಡೆದುಕೊಂಡರು
ಹಾವೇರಿಯಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಜಾಗಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಚಿವ ಶಿವಾನಂದ ಪಾಟೀಲ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರಿಂದ ಮಾಹಿತಿ ಪಡೆದುಕೊಂಡರು   

ಹಾವೇರಿ: ನಗರದಲ್ಲಿ ಫೆ. 13ರಂದು ನಡೆಯಬೇಕಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಸಾಧನಾ ಸಮಾವೇಶವನ್ನು, ಮುಖ್ಯಮಂತ್ರಿ ಸಮಯ ಸಿಗದಿದ್ದಕ್ಕೆ ಒಂದು ದಿನ ಮುಂದೂಡಿ ಫೆ. 14ರಂದು ಸಮಾವೇಶ ನಡೆಸಲು ದಿನ ನಿಗದಿಪಡಿಸಲಾಗಿದೆ.

ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ, 1,000 ದಿನಗಳ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಈ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಇದರ ಜೊತೆಯಲ್ಲಿ ಕಂದಾಯ ಇಲಾಖೆಯಿಂದ ರಾಜ್ಯದ ವಿವಿಧ ಜಿಲ್ಲೆಗಳ 1.23 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯೂ ನಡೆಯಲಿದೆ.

ಸಮಾವೇಶ ನಡೆಯುವ ಅಜ್ಜಯ್ಯ ದೇವಸ್ಥಾನ ಬಳಿಯ ಜಾಗಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಿದ್ಧತೆ ಕೆಲಸಗಳನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಫೆ. 13ರಂದು ವಿಶ್ವ ಡ್ಯಾಮ್‌ಗಳ ಸುರಕ್ಷಾ ವಿಭಾಗದ ಸಭೆ ಜರುಗಲಿದೆ. ಅದೇ ದಿನ ಹಂಪಿ ಉತ್ಸವ ಉದ್ಘಾಟನಾ ಸಮಾರಂಭವಿದೆ. ಎರಡೂ ಕಡೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ಅಂದು ಅವರಿಗೆ ಹಾವೇರಿಗೆ ಬರಲು ಆಗುವುದಿಲ್ಲ. ಹೀಗಾಗಿ, ಹಾವೇರಿ ನಗರದಲ್ಲಿ ಜರುಗಬೇಕಿದ್ದ ಸಮಾವೇಶವನ್ನು ಫೆ. 14ರಂದು ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

ADVERTISEMENT

‘ಸರ್ಕಾರದ ಆಡಳಿತ, ಒಂದು ಸಾವಿರ ದಿನ ಪೂರೈಸಿದ ಸಮಯದಲ್ಲಿ ಈ ಹಕ್ಕುಪತ್ರ ವಿತರಣೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರು, ಶಾಸಕರು ಹಾಗೂ ಫಲಾನುಭವಿಗಳು ಭಾಗವಹಿಸಲಿದ್ದಾರೆ.’

‘ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಾಹಕ ಸಮಿತಿ. ಹಣಕಾಸು ಸಮಿತಿ, ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಸಮಿತಿ ಮುಖ್ಯ ವೇದಿಕೆ ನಿರ್ಮಾಣ ಸಮಿತಿ, ಆಹಾರ ಮತ್ತು ಕುಡಿಯುವ ನೀರಿನ ಸಮಿತಿ, ಸಾರಿಗೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಸಮಿತಿ, ಹೆಲಿಪ್ಯಾಡ್ ನಿರ್ಮಾಣ ಸಮಿತಿ, ಕಾರ್ಯಕ್ರಮ ನಿರ್ವಹಣಾ ಮತ್ತು ಮುಖ್ಯ ವೇದಿಕ ಶಿಷ್ಟಾಚಾರ ಸಮಿತಿ, ಫಲಾನುಭವಿಗಳ ಆಸನ ವ್ಯವಸ್ಥೆ ಸಮಿತಿ, ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ, ವಸತಿ ಸಮಿತಿ ಆರೋಗ್ಯ ಸಮಿತಿ ಸೇರಿ 15 ಸಮಿತಿಗಳನ್ನು ರಚನೆ ಮಾಡಲಾಗಿದೆ’ ಎಂದು ಹೇಳಿದರು.

ಹಾವೇರಿ ಜಿಲ್ಲೆ ಸಾಧನೆ: ‘ಕಂದಾಯ ಇಲಾಖೆ ದಾಖಲೆಗಳನ್ನು ಕಾಗದ ರಹಿತವಾಗಿ ಡಿಜಿಟಲೀಕರಣ ಮಾಡುವುದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಕನಸಾಗಿತ್ತು. ಈಗಾಗಲೇ ದಾಖಲೆಗಳ ಸರಳೀಕರಣ ಮಾಡಲಾಗಿದೆ. ಕಳೆದ ಬಾರಿ ಹೊಸಪೇಟೆಯಲ್ಲಿ 1.11 ಲಕ್ಷ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ನೀಡಲಾಗಿದೆ. ಈ ಬಾರಿ ಹಾವೇರಿ ಸಮಾವೇಶದಲ್ಲಿ 1.23 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಗುರಿಯಿದೆ. ಹಾವೇರಿ ಜಿಲ್ಲೆಯಲ್ಲಿಯೇ 20 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದು ಜಿಲ್ಲೆ ವಿಶೇಷ ಸಾಧನೆ’ ಎಂದರು.

‘ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರದ ಮೂಲಕ ಇ–-ಸ್ವತ್ತು ನೀಡಲಾಗುತ್ತಿದೆ. ದೇಶದಲ್ಲೇ ಇದು ಎರಡನೇ ಕಾರ್ಯಕ್ರಮವಾಗಿದೆ. ಬೇರೆ ರಾಜ್ಯಗಳಿಗೆ ಇದು ಮಾದರಿ. ಜನ ಸಾಮಾನ್ಯರಿಗೆ ಬದುಕುವ ಹಕ್ಕು ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಕಂದಾಯ ಗ್ರಾಮ ಮಾಡುವ ಹೋರಾಟ: ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ‘ಹಾಡಿ, ಹಟ್ಟಿ, ತಾಂಡಾಗಳಲ್ಲಿ ಹಲವು ವರ್ಷಗಳಿಂದ ಜನರು ದಾಖಲೆ ರಹಿತವಾಗಿ ವಾಸಿಸುತ್ತಿದ್ದರು. ಮಾಲೀಕತ್ವದ ಹಕ್ಕು ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದರು. ಅವರಿಗೆ ನೆಮ್ಮದಿ ಬದುಕು ನಡೆಸಲು ಸರ್ಕಾರದಿಂದ ಹಕ್ಕುಪತ್ರ ನೀಡಲಾಗುತ್ತಿದೆ. ಕಂದಾಯ ಗ್ರಾಮ ಮಾಡುವುದು ಬಹಳ ದಿನಗಳ ಹೋರಾಟವಾಗಿದೆ’ ಎಂದರು.

ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಶಾಸಕರಾದ ಯಾಸೀರ ಅಹ್ಮದ ಖಾನ ಪಠಾಣ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್‌.ಪಿ. ಯಶೋಧಾ ವಂಟಗೋಡಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದರು.

ಫಲಾನುಭವಿಗಳಿಗೆ 2550 ವಾಹನ ವ್ಯವಸ್ಥೆ

’ ‘ಸಾಧನಾ ಸಮಾವೇಶದ ಕೇಂದ್ರಬಿಂದುಗಳು ಫಲಾನುಭವಿಗಳು. ಅವರನ್ನು ಹಾವೇರಿಯ ಸಮಾವೇಶ ಸ್ಥಳಕ್ಕೆ ಕರೆತರಲು ರಾಜ್ಯದಾದ್ಯಂತ 2550 ವಾಹನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ‘ಕೆಎಸ್‌ಆರ್‌ಟಿಸಿ ವಾಕರಸಾಸಂ ಕೆಕೆಆರ್‌ಟಿಸಿ ಕಡೆಯಿಂದ 2140 ಬಸ್‌ಗಳು 195 ಖಾಸಗಿ ಬಸ್‌ಗಳು 215 ಶಾಲಾ–ಕಾಲೇಜು ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಈ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಂಚಾರ ದಟ್ಟಣೆ ಉಂಟಾಗದಂತೆಯೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು. ‘ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಊಟದ ವ್ಯವಸ್ಥೆಗಾಗಿ 200 ಕೌಂಟರ್ 200 ಕಡೆ ತಾತ್ಕಾಲಿಕ ಶೌಚಾಲಯಗಳು ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.