ADVERTISEMENT

ಆಪತ್ಭಾಂಧವ ಮಾನೆ ವಿರುದ್ಧ ಕುತಂತ್ರ

ಬುದ್ಧಿವಂತ ಜನರು ಕಾಂಗ್ರೆಸ್ ಬೆಂಬಲಿಸುವರು: ವಿನಯ ಕುಲಕರ್ಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 3:49 IST
Last Updated 26 ಅಕ್ಟೋಬರ್ 2021, 3:49 IST
ಮಲಗುಂದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಮಾಜಿ ಸಚಿವ ವಿನಯ ಕುಲಕರ್ಣಿ ಮತಯಾಚಿಸಿದರು
ಮಲಗುಂದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಮಾಜಿ ಸಚಿವ ವಿನಯ ಕುಲಕರ್ಣಿ ಮತಯಾಚಿಸಿದರು   

ಹಾನಗಲ್: ಸುಳ್ಳು ಹೇಳುವುದು, ಮೋಸ ಮಾಡುವುದು, ಕುತಂತ್ರ ಎಂಬ ಮೂರು ಅಸ್ತ್ರಗಳನ್ನು ಹಾನಗಲ್ ಉಪ ಚುನಾವಣೆಯಲ್ಲಿ ವಿರೋಧಿಗಳು ಹೂಡಿದ್ದಾರೆ. ಏನೇ ಆದರೂ ಕೂಡ ಮತದಾರರು ಬುದ್ಧಿವಂತರಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎನ್ನುವ ತಿಳಿವಳಿಕೆ ಹೊಂದಿದ್ದು, ಕಷ್ಟದಲ್ಲಿ ಜೊತೆಗೆ ನಿಂತ ಆಪತ್ಭಾಂಧವ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಕೈ ಹಿಡಿಯಲಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಮಲಗುಂದ, ನೀರಲಗಿ ಸೇರಿದಂತೆ
ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿ ಮಾತನಾಡಿದರು. ಶ್ರೀನಿವಾಸ್ ಮಾನೆ ಅವರಿಗೆ ಹಲವು ಸಕಾರಾತ್ಮಕ ಅಂಶಗಳಿವೆ. ಗೆದ್ದವರೇ ಜನಸೇವೆ ಮಾಡಲು ಹಿಂಜರಿಯುತ್ತಾರೆ. ಆದರೆ ಇವರು ಮಾತ್ರ ಸೋತರೂ ಜನಸೇವೆ ಮಾಡಿ, ಜನಾನುರಾಗಿ ಎನಿಸಿದ್ದಾರೆ. ಕಷ್ಟದಲ್ಲಿಯೂ ಜೊತೆಗಿದ್ದಾರೆ. ಸಮಸ್ಯೆಗಳನ್ನು ಆಲಿಸಿದ್ದಾರೆ, ಕ್ಷೇತ್ರದಲ್ಲಿ ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಿದ್ದಾರೆ.

ಇದೆಲ್ಲಕ್ಕಿಂತಲೂ ಪ್ರಮುಖವಾಗಿ ಜನಸಾಮಾನ್ಯರ ಕೈಗೆ ಸಿಕ್ಕಿದ್ದಾರೆ. ಪ್ರತಿನಿತ್ಯ ಜನರೊಂದಿಗೆ
ಬೆರೆತಿದ್ದಾರೆ. ಇಷ್ಟು ಸಾಕಲ್ಲವೇ ಶ್ರೀನಿವಾಸ್ ಮಾನೆ ಅವರು ಗೆಲ್ಲಲು ಎಂದು ಪ್ರಶ್ನಿಸಿದರು.

ADVERTISEMENT

ಹಾನಗಲ್ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿನ ಜನ ಪ್ರತಿಬಾರಿಯೂ ಜಾಣತನ ಮೆರೆದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಅಭ್ಯರ್ಥಿಗಳನ್ನು
ತುಲನೆ ಮಾಡಿ ಯೋಗ್ಯ ನಿರ್ಣಯ ಕೈಗೊಳ್ಳಲಿದ್ದಾರೆ. ಹಾನಗಲ್‌ ಕ್ಷೇತ್ರದಲ್ಲಿ ಜನ ಶ್ರೀನಿವಾಸ್ ಮಾನೆ ಕೈ ಬಲಪಡಿಸಲಿದ್ದು, ಅವರೂ
ಕೂಡ ಕ್ಷೇತ್ರಕ್ಕೆ ನ್ಯಾಯ ದೊರಕಿಸುವ ಕೊಡಲು ಸಮರ್ಥರಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.