ಹಾವೇರಿ: ‘ನಗರದ ಶಹರ ಪೊಲೀಸ್ ಠಾಣೆ ಹಿಂಭಾಗದಲ್ಲಿದ್ದ ಪೊಲೀಸ್ ವಸತಿ ಗೃಹಗಳನ್ನು ನೆಲಸಮ ಮಾಡಿರುವ ಜಾಗದಲ್ಲೇ ₹10 ಕೋಟಿ ವೆಚ್ಚದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ’ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದರು.
ನಗರಕ್ಕೆ ಸೋಮವಾರ ಭೇಟಿ ನೀಡಿದ ಡಿಜಿಪಿ ಪ್ರವೀಣ್ ಸೂದ್ ಅವರು, ಕೆರಿಮತ್ತಿಹಳ್ಳಿಯಲ್ಲಿ ಜಲಾವೃತವಾಗಿರುವ ಹಳೆಯ ಎಸ್ಪಿ ಕಚೇರಿ ಕಟ್ಟಡ ಹಾಗೂ ನಗರದ ಡಿಎಆರ್ ಕಟ್ಟಡವನ್ನು ವೀಕ್ಷಿಸಿದರು. ನಂತರ ಎಂ.ಜಿ.ರಸ್ತೆಯಲ್ಲಿರುವ ಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ನಂತರ ಮಳೆಯಲ್ಲೇ ಹೊಸ ಎಸ್ಪಿ ಕಚೇರಿ ನಿರ್ಮಿಸಲಿರುವ ಜಾಗವನ್ನು ಪರಿಶೀಲಿಸಿ, ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು.
‘ಎಸ್ಪಿ ಕಚೇರಿ ಪಕ್ಕದಲ್ಲೇ ಸಂಚಾರ ಪೊಲೀಸ್ ಠಾಣೆ ಕೂಡ ನಿರ್ಮಾಣವಾಗಲಿದೆ.ಶಿಗ್ಗಾವಿಯಲ್ಲಿ ಡಿವೈಎಸ್ಪಿ ಮತ್ತು ಸಿಪಿಐ ಕಚೇರಿ ಸೇರಿದಂತೆ ಒಂದೇ ಕಾಂಪ್ಲೆಕ್ಸ್ನಲ್ಲಿ ಎರಡು ಕಟ್ಟಡ ನಿರ್ಮಾಣವಾಗಲಿದೆ. ಶಿಗ್ಗಾವಿಯ ಕೆಎಸ್ಆರ್ಪಿ ತರಬೇತಿ ಶಾಲೆಯಲ್ಲಿ ಹೊಸ ಕಟ್ಟಡ ಮತ್ತು ಕಾಂಪೌಂಡ್ ನಿರ್ಮಿಸುತ್ತೇವೆ’ ಎಂದರು.
ಜಿಲ್ಲಾ ಸಶಸ್ತ್ರ ಮೀಡಲು ಪಡೆ (ಡಿಎಆರ್) ಕಟ್ಟಡ ಎಲ್ಲಿ ಕಟ್ಟಬೇಕು ಎಂದು ಯೋಚನೆ ಮಾಡುತ್ತಿದ್ದೇವೆ. ಅದಕ್ಕೆ ಸಾಕಷ್ಟು ಜಾಗ ಬೇಕಿದೆ. ಐಜಿ ಮತ್ತು ಎಸ್ಪಿ ಅವರ ಜತೆ ಚರ್ಚೆ ಮಾಡಲು ಬಂದಿದ್ದೇನೆ. ಡಾಗ್ ಕೆನಲ್ ಕಟ್ಟುವ ಬಗ್ಗೆಯೂ ಚಿಂತನೆಯಿದೆ ಎಂದು ಹೇಳಿದರು.
ಕೆರಿಮತ್ತಿಹಳ್ಳಿ ಕೆರೆಯಲ್ಲಿ ನೀರು ಬಂದಿದೆ. ಎಸ್ಪಿ ಕಚೇರಿ ಕಟ್ಟಿದ ಸಂದರ್ಭ ನೀರು ಇರಲಿಲ್ಲ. ಒಂದು ವರ್ಷದಲ್ಲಿ 8 ತಿಂಗಳು ನೀರಿನ ಸಮಸ್ಯೆ ಇರುವುದಿಲ್ಲ. ನಾಲ್ಕು ತಿಂಗಳು ನೀರು ಬರುತ್ತದೆ. ಸಮಸ್ಯೆ ನಿವಾರಣೆಗೆ ಅಲ್ಲಿ ಯಾವ ರೀತಿ ಮೂಲಸೌಕರ್ಯ ಕಲ್ಪಿಸಬೇಕು. ತರಬೇತಿ ಶಾಲೆ, ಇತರ ಕಟ್ಟಡ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಸುತ್ತೇವೆ ಎಂದರು.
ನಗರದ ಸಿಸಿಟಿವಿ ಕ್ಯಾಮೆರಾ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗಿತ್ತು. ಈಗ ಅವಧಿ ಮುಕ್ತಾಯವಾಗಿದ್ದು, ಈ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ದಾವಣಗೆರೆ ಪೂರ್ವ ವಲಯದ ಐಜಿಪಿ ರವಿ ಎಸ್.,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್ಪಿ ವಿಜಯಕುಮಾರ ಸಂತೋಷ, ಇನ್ಸ್ಪೆಕ್ಟರ್ ಪ್ರಹ್ಲಾದ ಚನ್ನಗಿರಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.