ADVERTISEMENT

ಹಾವೇರಿ | ಕಾರ್ಪೊರೇಷನ್ ಬ್ಯಾಂಕ್ ವಿಲೀನ: ರೈತರಿಗೆ ಅನ್ಯಾಯ

ಬೇಡಿಕೆ ಈಡೇರಿಕೆಗೆ ಆಗ್ರಹ: ಸಂಸದರ ಕಚೇರಿ ಎದುರು ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 1:51 IST
Last Updated 25 ಸೆಪ್ಟೆಂಬರ್ 2025, 1:51 IST
‘ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಯಲ್ಲಿ ಕಾರ್ಪೊರೇಷನ್ ಬ್ಯಾಂಕ್‌ನ್ನು ವಿಲೀನಗೊಳಿಸಲಾಗಿದ್ದು, ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿ ಜಿಲ್ಲಾ ಲೀಡ್ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ) ವ್ಯವಸ್ಥಾಪಕರಿಗೆ ಸಂತ್ರಸ್ತ ರೈತರು ಬುಧವಾರ ಮನವಿ ಸಲ್ಲಿಸಿದರು 
‘ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಯಲ್ಲಿ ಕಾರ್ಪೊರೇಷನ್ ಬ್ಯಾಂಕ್‌ನ್ನು ವಿಲೀನಗೊಳಿಸಲಾಗಿದ್ದು, ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿ ಜಿಲ್ಲಾ ಲೀಡ್ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ) ವ್ಯವಸ್ಥಾಪಕರಿಗೆ ಸಂತ್ರಸ್ತ ರೈತರು ಬುಧವಾರ ಮನವಿ ಸಲ್ಲಿಸಿದರು    

ಹಾವೇರಿ: ‘ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಯಲ್ಲಿ ಕಾರ್ಪೊರೇಷನ್ ಬ್ಯಾಂಕ್‌ನ್ನು ವಿಲೀನಗೊಳಿಸಲಾಗಿದ್ದು, ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿ ಜಿಲ್ಲಾ ಲೀಡ್ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ) ವ್ಯವಸ್ಥಾಪಕರಿಗೆ ಸಂತ್ರಸ್ತ ರೈತರು ಬುಧವಾರ ಮನವಿ ಸಲ್ಲಿಸಿದರು.

ಇಲ್ಲಿಯ ಜಿಲ್ಲಾ ಕೇಂದ್ರದ ಕಚೇರಿಯಲ್ಲಿ ವ್ಯವಸ್ಥಾಪಕರನ್ನು ಭೇಟಿಯಾದ ರೈತರು ಹಾಗೂ ಮುಖಂಡರು, ‘ನಮ್ಮ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಬೇಕು. ಇಲ್ಲದಿದ್ದರೆ, ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ ಹಲವು ರೈತರು ಸಾಲ ಪಡೆದುಕೊಂಡಿದ್ದರು. ಇದರ ನಡುವೆಯೇ ಕಾರ್ಪೋರೇಷನ್‌ ಬ್ಯಾಂಕ್‌ನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನಗೊಳಿಸಲಾಗಿದೆ. ಈ ಹೊಸ ಬ್ಯಾಂಕ್, ಏಕತಿರುವಳಿ ಯೋಜನೆಯನ್ನು ನೆಪಮಾತ್ರಕ್ಕೆ ಜಾರಿಗೊಳಿಸುತ್ತಿದೆ. ಈ ಬ್ಯಾಂಕ್‌ನ ರೈತ ವಿರೋಧಿ ನೀತಿಗಳಿಂದಾಗಿ, ಕೃಷಿ ಸಾಲ ಪಡೆದಿದ್ದ ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ’ ಎಂದು ಹೇಳಿದರು.

ADVERTISEMENT

‘ರೈತರಿಂದ ಸಾಲ ವಸೂಲು ಮಾಡಲು ಬ್ಯಾಂಕ್‌ನವರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಲದ ಬಡ್ಡಿ, ಚಕ್ರಬಡ್ಡಿ ಸಮೇತ ವಸೂಲಾತಿ ಮಾಡುತ್ತಿದ್ದಾರೆ. ಕಾರ್ಪೋರೇಶನ್ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ರೈತ ಪರ ನಿಲುವುಗಳಿದ್ದವು. ಈಗ ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ ರೈತರ ಒಪ್ಪಿಗೆಯನ್ನು ಪಡೆಯದೆ ರೈತರ ಸಾಲಗಳನ್ನು ಸ್ವಯಂ ನವೀಕರಿಸಿಕೊಳ್ಳುವ ಪ್ರಕ್ರಿಯೆ ಮಾಡುತ್ತಿದೆ. ಸಾಲದ ನವೀಕರಣ ಪ್ರಕ್ರಿಯೆಯ ಅರಿವಿಲ್ಲದ ರೈತರಿಗೆ ಅಸಲು, ಬಡ್ಡಿ, ಚಕ್ರಬಡ್ಡಿ ಹೆಚ್ಚಾಗುತ್ತಿದೆ. ಮರುಪಾವತಿ ಸಾಧ್ಯವಾಗದಷ್ಟು ಸಾಲ ಬೆಳೆದಿದೆ’ ಎಂದು ರೈತರು ದೂರಿದರು.

‘ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಾಲದ ಮೂಲ ಅಸಲಿನ ಮೊತ್ತದಲ್ಲಿ ಶೇ 40ರಿಂದ 60ರಷ್ಟು ಅಸಲಿನ ಹಣವನ್ನು ಪಾವತಿಸಲು ಏಕತಿರುವಳಿ (ಒಟಿಎಸ್) ಯೋಜನೆಯಲ್ಲಿ ಅವಕಾಶ ನೀಡಿವೆ. ಈ ಮೂಲಕ ರೈತರನ್ನು ಸಾಲ ಮುಕ್ತರನ್ನಾಗಿ ಮಾಡುತ್ತಿವೆ. ಈ ಅವಕಾಶಕ್ಕೆ ಆರ್‌ಬಿಐ ಸಹ ಅನುಮತಿ ನೀಡಿದೆ. ಆದರೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಾಟಾಚಾರಕ್ಕೆ ಈ ಯೋಜನೆ ಪಾಲಿಸುತ್ತಿದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗುತ್ತಿದೆ’ ಎಂದು ಆರೋಪಿಸಿದರು.

‘ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿರುವ ಕೃಷಿ ಸಾಲದ ಬಗ್ಗೆ ಮಾಹಿತಿ ಪಡೆಯಬೇಕು. ಬ್ಯಾಂಕ್ ಮಾಡಿರುವ ಅಕ್ರಮಗಳನ್ನು ಪತ್ತೆ ಮಾಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಒಟಿಎಸ್ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ರೈತರ ಹಿತಾಸಕ್ತಿ ಕಾಯಬೇಕು’ ಎಂದು ರೈತರು ಆಗ್ರಹಿಸಿದರು.

ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲ, ಈರಣ್ಣ ಹಲಗೇರಿ, ಸುರೇಶ ಮಲ್ಲಾಪುರ, ಹರಿಹರಗೌಡ ಪಾಟೀಲ, ಅಜ್ಜಪ್ಪ ಹಲಗೇರಿ, ಆನಂದಪ್ಪ ರಂಗಣ್ಣನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.