ಹಾವೇರಿ: ನಗರಸಭೆ ವ್ಯಾಪ್ತಿಯ ಎಲ್ಲಾ ತರಕಾರಿ, ಹೂವಿನ ಮಾರುಕಟ್ಟೆಗಳನ್ನು ಹಾಗೂ ವಾರದ ಸಂತೆಯನ್ನು ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
ನಗರದಲ್ಲಿರುವ ತರಕಾರಿ, ಹೂವು ಹಾಗೂ ವಾರದ ಸಂತೆಯ ಮಾರಾಟಗಾರರು ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಅಂತರ ಕಾಪಾಡಿಕೊಂಡು, ಕೋವಿಡ್-19 ಮಾರ್ಗಸೂಚನೆಗಳನ್ನು ಪಾಲಿಸಿ ವ್ಯಾಪಾರ ವಹಿವಾಟ ನಡೆಸಲು ತಿಳಿಸಲಾಗಿದೆ.
ಸಾರ್ವಜನಿಕರು ಕೂಡ ಕೋವಿಡ್ ನಿಯಮ ಪಾಲಿಸಿ ಸಾಮಗ್ರಿ ಖರೀದಿಸಬೇಕು. ಮೈದಾನವನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ತರಕಾರಿ, ಹೂವಿನ ವ್ಯಾಪಾರವನ್ನು ಮಾಡದಿರಲು ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ ಹಾಗೂ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರುಕಟ್ಟೆ ಬಂದ್:ಹಾವೇರಿ ನಗರದ ಹಾನಗಲ್ ರಸ್ತೆಯ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿದ್ದ ‘ತರಕಾರಿ ಸಗಟು (ಹೋಲ್ಸೇಲ್) ಮಾರುಕಟ್ಟೆ’ಯನ್ನು ಕೋವಿಡ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಏಪ್ರಿಲ್ 26ರಿಂದ (ಸೋಮವಾರದಿಂದ ಶನಿವಾದರವರೆಗೆ ವಾರದ ಆರು ದಿನಗಳು) ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬೆಳಿಗ್ಗೆ 6ರಿಂದ 9ರವರೆಗೆ ತರಕಾರಿ ಮಾರುಕಟ್ಟೆ ನಡೆಯಲು ಅವಕಾಶ ಕಲ್ಪಿಸಲಾಗಿದೆ.
ರೈತರು ತರಕಾರಿಯನ್ನು ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕೆ ನೇರವಾಗಿ ತರಬೇಕು. ಈ ತಾತ್ಕಾಲಿಕ ಬದಲಾವಣೆಗೆ ರೈತರು ಮತ್ತು ವ್ಯಾಪಾರಿಗಳು ಸಹಕರಿಸಬೇಕು ಎಂದು ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.