ಹಾವೇರಿ: ಮಾತ್ರೆಯನ್ನು ಕೈಗೆ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆಯೊಬ್ಬರು ‘ಕೊರೊನಾ ಸೈನಿಕ’ರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಜತೆಶನಿವಾರ ರಂಪಾಟ ಮಾಡಿದ್ದಾರೆ.
ನಗರದ ಮೈಲಾರ ಮಹದೇವ ಸರ್ಕಲ್ನಲ್ಲಿರುವ ನಂ.2 ಸರ್ಕಾರಿ ಶಾಲೆಯಲ್ಲಿ ಜಿಲ್ಲಾಸ್ಪತ್ರೆಯ ಹೊರರೋಗಿಗಳ ವಿಭಾಗವನ್ನು ತೆರೆಯಲಾಗಿದೆ. ಇಲ್ಲಿಗೆ ಮಗಳೊಂದಿಗೆ ತಪಾಸಣೆಗೆ ಬಂದಿದ್ದ ರೈತ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅಕ್ಕಿ ಅವರು ಫಾರ್ಮಸಿಸ್ಟ್ ಅಂಜನಾ ಪಾಟೀಲ ಎಂಬುವರು ಸರಿಯಾಗಿ ಮಾತ್ರೆ ಕೊಡಲಿಲ್ಲ, ಕವರ್ ನೀಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ನಿಂದಿಸಿದ್ದಾರೆ. ಮೊಬೈಲ್ ನೆಲಕ್ಕೆ ಎಸೆದು ರಂಪಾಟ ಮಾಡಿದ್ದಾರೆ. ಶಹರ ಠಾಣೆ ಇನ್ಸ್ಪೆಕ್ಟರ್ ಪ್ರಭಾವತಿ ಶೇತಸನದಿ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
‘9 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾನು ಯಾರೊಂದಿಗೂ ನಾನು ಅಗೌರವದಿಂದ ವರ್ತಿಸಿಲ್ಲ. ಕ್ಷುಲ್ಲಕ ಕಾರಣವನ್ನು ದೊಡ್ಡದಾಗಿ ಮಾಡಿ ಮೊಬೈಲ್ ಒಡೆದಿದ್ದಾರೆ. ಇಂಥ ಘಟನೆಗಳಿಂದ ಕರ್ತವ್ಯ ನಿರ್ವಹಿಸಲು ಭಯ ಉಂಟಾಗುತ್ತಿದೆ’ ಎಂದು ಫಾರ್ಮಾಸಿಸ್ಟ್ ಅಂಜನಾ ಪಾಟೀಲ ಹೇಳಿದ್ದಾರೆ.
‘ಕಿವಿ ನೋವು ತೋರಿಸಲು ಹೋಗಿದ್ದೆ. ಆದರೆ, ಅಲ್ಲಿದ್ದ ಸಿಬ್ಬಂದಿ ಒಂದು ಕೈಯಲ್ಲಿ ಮೊಬೈಲ್, ಮತ್ತೊಂದು ಕೈಯಲ್ಲಿ ಚಕ್ಕುಲಿ ತಿನ್ನುತ್ತಾ ಇದ್ದರು. ಔಷಧದ ಬಗ್ಗೆ ಸರಿಯಾಗಿ ಮಾಹಿತಿ ನೀಡಲಿಲ್ಲ. ಔಷಧ ಹಾಕಿಕೊಳ್ಳಲು ಒಂದು ಕವರ್ ಕೇಳಿದ್ದಕ್ಕೆ ಉದ್ಧಟತನದಿಂದ ವರ್ತಿಸಿದರು. ನನ್ನ ಮಗಳ ಮೊಬೈಲ್ ಕೂಡ ಹಾಳಾಗಿದೆ’ ಎಂದು
ರೈತ ನಾಯಕಿ ಮಂಜುಳಾ ಅಕ್ಕಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.