ADVERTISEMENT

ಹಾವೇರಿ: ಬೆಳೆ ಹಾನಿ, ಸಚಿವರಿಂದ ಪರಿಶೀಲನೆ

ಗರಿಷ್ಠ 2 ಎಕರೆ ಮಿತಿ ಸಡಿಲಿಸಿ, ಪೂರ್ಣ ಪರಿಹಾರ ನೀಡಲು ಅನ್ನದಾತರ ಮನವಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 14:33 IST
Last Updated 6 ಆಗಸ್ಟ್ 2021, 14:33 IST
ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಯಾದ ಕೃಷಿ ಜಮೀನುಗಳಿಗೆ ಸಚಿವ ಬಿ.ಸಿ.ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು 
ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಯಾದ ಕೃಷಿ ಜಮೀನುಗಳಿಗೆ ಸಚಿವ ಬಿ.ಸಿ.ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು    

ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ರೈತರ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿದ ಸಚಿವ ಬಿ.ಸಿ. ಪಾಟೀಲ ಅವರು ಪರಿಶೀಲನೆ ನಡೆಸಿ, ರೈತರ ಅಹವಾಲು ಆಲಿಸಿದರು.

ಬ್ಯಾಡಗಿ ಮತ ಕ್ಷೇತ್ರದ ವರದಾಹಳ್ಳಿ ಹಾಗೂ ಹಾವೇರಿ ತಾಲ್ಲೂಕಿನ ನಾಗನೂರ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರ, ಹೊಳೆಆಲೂರ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ನಡೆಸಿದರು.

ವರದಾಹಳ್ಳಿಯಲ್ಲಿ ಮಳೆಗೆ ಕೊಚ್ಚಿಹೋದ ತರಕಾರಿ, ಸೋಯಾಬಿನ್, ಹತ್ತಿ ಬೆಳೆಗಳ ಪರಿಶೀಲನೆ ನಡೆಸಿದರು.ನಾಗನೂರ ಗ್ರಾಮದಲ್ಲಿ ಹಾಳಾದ ಶೇಂಗಾ, ಸೋಯಾಬಿನ್, ಕಬ್ಬು ಬೆಳೆಗಳನ್ನು ಪರಿಶೀಲನೆ ನಡೆಸಿದರು. ಮಾಕನೂರ ಮತ್ತು ಹೊಳೆಆನ್ವೇರಿ ಗ್ರಾಮಗಳಿಗೆ ಭೇಟಿ ನೀಡಿ, ತರಕಾರಿ ಬೆಳೆ, ಭತ್ತ ನಾಟಿ ಮಾಡುವ ಸ್ಥಳದಲ್ಲಿ ಮಣ್ಣು ತುಂಬಿಕೊಂಡಿರುವ ಜಮೀನುಗಳನ್ನು ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದರು.

ADVERTISEMENT

ರೈತರ ಮನವಿ:

ಬೆಳೆ ಪರಿಹಾರ ನೀಡುವಲ್ಲಿ ಎರಡು ಎಕರೆ ಗರಿಷ್ಠ ಎಂಬ ಮಾನದಂಡವನ್ನು ಸಡಿಲಿಸಬೇಕು. ರೈತರ ಬೆಳೆ ಎಷ್ಟು ಎಕರೆಯಲ್ಲಿ ಹಾನಿಯಾಗಿದೆ ಅಷ್ಟು ಭೂಮಿಗೂ ಪರಿಹಾರ ಒದಗಿಸಬೇಕು. ಮಳೆಯಿಂದ ಬೆಳೆಯ ಮೇಲೆ ಮಣ್ಣು ತುಂಬಿಕೊಂಡು ಹಾನಿಯಾಗಿದೆ. ಕೆಲ ನದಿ, ಹಳ್ಳಗಳ ಪಕ್ಕದ ಜಮೀನಿನಲ್ಲಿ ಗುಂಟೆಗಟ್ಟಲೇ ಜಮೀನು ಕೊಚ್ಚಿಹೋಗಿದೆ. ಇದಕ್ಕೂ ಪರಿಹಾರ ನೀಡಬೇಕು. ಇಲ್ಲವಾದರೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಮನವಿ ಮಾಡಿಕೊಂಡರು.

ಸಚಿವರ ಭರವಸೆ:

ರೈತರ ಮನವಿಗೆ ಸ್ಪಂದಿಸಿದ ಸಚಿವ ಬಿ.ಸಿ. ಪಾಟೀಲ, ಪರಿಹಾರ ನೀಡುವ ಗರಿಷ್ಠ ಮಿತಿಯನ್ನು ಸಡಿಲಿಸಿ ಹಾನಿಯಾದ ಪ್ರದೇಶಕ್ಕೆ ಪರಿಹಾರ ನೀಡುವ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿ ಅವರೊಂದಿಗೆಚರ್ಚಿಸಲಾಗಿದೆ ಹಾಗೂ ಪ್ರವಾಹದಿಂದ ಕೊಚ್ಚಿಹೋದ ಭೂಮಿ ಹಾಗೂ ಜಮೀನಿನಲ್ಲಿ ಉಸುಕು ತುಂಬಿದ ಜಮೀನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಾಗನೂರ ಬೆಳೆಹಾನಿ ಪ್ರದೇಶದಲ್ಲಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಸ್ಥಳದಲ್ಲಿ ನಿಂತು ಮಾಹಿತಿ ನೀಡದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತಹಶೀಲ್ದಾರ್‌ ಮೇಲೆ ಸಿಡಿಮಿಡಿಗೊಂಡು ಆಡಳಿತ ವ್ಯವಸ್ಥೆ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹೆಲಿಪ್ಯಾಡ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿ’

ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿ ನಗರದಲ್ಲಿ ನೂತನ ಹೆಲಿಪ್ಯಾಡ್‌ ನಿರ್ಮಿಸಲು ಹಾಗೂ ಸುಸಜ್ಜಿತ ಜಿ+1 ಪ್ರವಾಸಿ ಮಂದಿರ ನಿರ್ಮಿಸಲು ಪ್ರಸ್ತಾವ ಸಲ್ಲಿಸಿ ಎಂದು ಸಚಿವ ಬಿ.ಸಿ.ಪಾಟೀಲ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ನೆರೆ ಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡುವ ಬಗ್ಗೆ ನಮಗೆ ಮಾಹಿತಿಯನ್ನೇ ನೀಡಿಲ್ಲ ಎಂದು ರಾಣೆಬೆನ್ನೂರು ಶಾಸಕ ಅರುಣಕುಮಾರ್‌ ಪೂಜಾರ ಮತ್ತು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.