ಬ್ಯಾಡಗಿ: ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿದ್ದ ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 932 ರೈತರ 2015–16ನೇ ಸಾಲಿನ ಬೆಳೆ ವಿಮೆ ಪರಿಹಾರದ ಮೊತ್ತ₹1.23 ಕೋಟಿ ಮಂಜೂರಾದ ಹಿನ್ನೆಲೆಯಲ್ಲಿ ರೈತರು ಬುಧವಾರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಈ ಹಿಂದೆ ತಾಲ್ಲೂಕಿನ ಮೋಟೆಬೆನ್ನೂರ, ಬುಡಪನಹಳ್ಳಿ ಹಾಗೂ ಬಿಸಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರ ಬೆಳೆ ವಿಮೆ ಪರಿಹಾರವನ್ನು ನೀಡಲು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಸಾಮಾನ್ಯ ವಿಮಾ ಸಂಸ್ಥೆ ತಿರಸ್ಕರಿಸಿತ್ತು. 1,581 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ ಗೋವಿನ ಜೋಳಕ್ಕೆ ₹4.92ಕೋಟಿ ಮೊತ್ತಕ್ಕೆ ವಿಮೆ ಕಂತು ಪಾವತಿಸಲಾಗಿತ್ತು.
ಇದಕ್ಕೆ ಸಂಘದ ಅವಿರತ ಹೋರಾಟ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲರ ಸಹಕಾರದಿಂದ ಮೋಟೆಬೆನ್ನೂರ ಪಂಚಾಯ್ತಿ ರೈತರ ಬೆಳೆ ವಿಮೆ ಪರಿಹಾರದ ಹಣ ಮಂಜೂರ ಮಾಡಿಸಲು ಸಾಧ್ಯವಾಯಿತು. ಒಗ್ಗಟ್ಟಿನ ಹೋರಾಟಕ್ಕೆ ಫಲ ದೊರೆತ್ತಿದ್ದು, ಸಂಘಟಿತ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು.
ಈ ವೇಳೆ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಣ್ಣ ಎಲಿ ಸೇರಿದಂತೆ ನೂರಾರು ರೈತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.