ADVERTISEMENT

ಹಾನಗಲ್ | ರೈತರಿಂದ ತೋಟಗಾರಿಕೆ ಇಲಾಖೆಗೆ ಮುತ್ತಿಗೆ

ಅಡಿಕೆ, ಮಾವು ಬೆಳೆಗೆ ವಿಮೆ ಪರಿಹಾರ ವಿಳಂಬ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 2:10 IST
Last Updated 11 ಅಕ್ಟೋಬರ್ 2025, 2:10 IST
ಹಾನಗಲ್ ತಾಲ್ಲೂಕಿನಲ್ಲಿ ವಿಮೆ ಕಂತು ಕಟ್ಟಿದ ರೈತರ ಅಡಿಕೆ ಮತ್ತು ಮಾವು ಬೆಳೆಗೆ ಪರಿಹಾರ ಮೊತ್ತ ವಿಳಂಬ ಖಂಡಿಸಿ ಶುಕ್ರವಾರ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಹಾನಗಲ್ ತಾಲ್ಲೂಕಿನಲ್ಲಿ ವಿಮೆ ಕಂತು ಕಟ್ಟಿದ ರೈತರ ಅಡಿಕೆ ಮತ್ತು ಮಾವು ಬೆಳೆಗೆ ಪರಿಹಾರ ಮೊತ್ತ ವಿಳಂಬ ಖಂಡಿಸಿ ಶುಕ್ರವಾರ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.   

ಹಾನಗಲ್:ಅಡಿಕೆ ಮತ್ತು ಮಾವು ಬೆಳೆಗೆ ವಿಮೆ ಪರಿಹಾರ ವಿಳಂಬ ಖಂಡಿಸಿ ಶುಕ್ರವಾರ ಇಲ್ಲಿನ ತೋಟಗಾರಿಕೆ ಇಲಾಖೆಗೆ ಮುತ್ತಿಗೆ ಹಾಕಿದ್ದ ರೈತ ಸಂಘದವರು ಪರಿಹಾರ ಬಿಡುಗಡೆಗೆ ಒತ್ತಾಯಿಸಿದರು.

2024-25 ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಅಡಿಕೆ ಬೆಳೆಗೆ ವಿಮೆ ನೋಂದಣಿ ಮಾಡಿಸಿದ್ದ ತಾಲ್ಲೂಕಿನ 11,327 ರೈತರ 6,498 ಹೆಕ್ಟೇರ್‌ ಪ್ರದೇಶಕ್ಕೆ ವಿಮಾ ಪರಿಹಾರ ಆಗಿಲ್ಲ. ಜೂನ್ ಅಂತ್ಯಕ್ಕೆ ವಿಮೆ ಪರಿಹಾರ ಬಿಡುಗಡೆಯಾಗಬೇಕಿತ್ತು. ಇದೇ ಸಾಲಿನ ಮಾವು ಬೆಳೆಗೆ ವಿಮೆ ನೋಂದಣಿ ಮಾಡಿಸಿದ 3,496 ರೈತರ 2684 ಹೆಕ್ಟೇರ್‌ ಭೂಮಿಯ ಫಸಲಿಗೆ ಮೇ ಅಂತ್ಯಕ್ಕೆ ವಿಮೆ ಪರಿಹಾರ ಜಮೆಯಾಗಬೇಕಿತ್ತು.
ಈ ಎರಡೂ ಬೆಳೆಗಳ ಪರಿಹಾರ ಮೊತ್ತಕ್ಕೆ ಬಡ್ಡಿ ಸೇರಿಸಿ ಶೀಘ್ರದಲ್ಲಿ ಜಮೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

2023-24 ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಶುಂಠಿ, ಹಸಿಮೆಣಸಿನಕಾಯಿ, ಮಾವು ಅಡಿಕೆ ಬೆಳೆಗೆ ವಿಮೆ ಕಂತು ಕಟ್ಟಿದ ಕೆಲವು ರೈತರಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ.  ತಾಂತ್ರಿಕ ದೋಷ ಸರಿಪಡಿಸಿ ರೈತರ ಖಾತೆಗೆ ವಿಮೆ ಮೊತ್ತ ಜಮೆಗೊಳಿಸಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಆಗ್ರಹಿಸಿದರು.

ADVERTISEMENT

‘ವಿಮೆ ಕಂಪನಿಯೊಂದಿಗೆ ಚರ್ಚಿಸಿ 10 ದಿನದ ಒಳಗಾಗಿ ಅಡಿಕೆ ಬೆಳೆಗೆ ಪರಿಹಾರ ಮತ್ತು ಈ ತಿಂಗಳ ಅಂತ್ಯದಲ್ಲಿ ಮಾವು ಬೆಳೆಗೆ ಪರಿಹಾರ ಮೊತ್ತ ಜಮೆಗೊಳಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಸ್ವಾಮಿ ಭರವಸೆ ನೀಡಿದರು.

ವಿಮೆ ಕಂಪನಿ ಅಧಿಕಾರಿ ಬಸವರಾಜ ಹಿರೇಮಠ ಮತ್ತು ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿ ಭುವನೇಶ್ವರ ಇದ್ದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ, ರೈತರಾದ ರುದ್ರಪ್ಪ ಹಣ್ಣಿ, ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಶ್ರೀಧರ ಮಲಗುಂದ, ಉಮೇಶ ಮೂಡಿ, ಅಶೋ ಸಂಶಿ, ಕೊಟ್ರೇಶಪ್ಪ ಬೆಲ್ಲದ, ಶ್ರೀಕಾಂತ ದುಂಡಣ್ಣನವರ, ರಾಜೀವ ದಾನಪ್ಪನವರ, ರಾಜೇಂದ್ರಪ್ಪ ಗಾಳಪೂಜಿ, ಮಾಲಿಂಗಪ್ಪ ಅಕ್ಕಿವಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.