ಹಾವೇರಿ: ಏಲಕ್ಕಿ ಕಂಪಿನ ನಾಡಿನ ರಾಮಭಕ್ತ ವಿವೇಕಾನಂದ ಎಸ್. ಇಂಗಳಗಿ ಅವರು ಹನುಮನ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ಅಯೋಧ್ಯೆವರೆಗೆ ಸೈಕಲ್ ಮೂಲಕ ಯಾತ್ರೆ ಕೈಗೊಂಡಿದ್ದಾರೆ.
ಹಾವೇರಿಯ ಹುಕ್ಕೇರಿಮಠದಿಂದ ಯುಗಾದಿ ಹಬ್ಬದ ದಿನವಾದ ಮಂಗಳವಾರಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಅಲ್ಲಿ ನೆರೆದಿದ್ದ ಗಣ್ಯರು ಶುಭ ಹಾರೈಸಿದರು.
ವಿವೇಕಾನಂದ ಅವರು ತಮ್ಮಒತ್ತಡದ ಕೆಲಸಗಳ ನಡುವೆ ದೇಶದ ಒಳಿತಿಗಾಗಿ ಸಂಕಲ್ಪ ಮಾಡಿಕೊಂಡು ಯಾತ್ರೆಯನ್ನು ಕೈಗೊಂಡಿದ್ದಾರೆ. ಕೊರೊನಾ ಮುಕ್ತ ಭಾರತ, ಹಾವೇರಿ ಜಿಲ್ಲೆಯ ಅಭಿವೃದ್ಧಿ, ಸಮಸ್ತ ಕರ್ನಾಟಕ ಜನರ ಒಳಿತು, ಜೀವಜಲ ಉಳಿವು... ಈ ರೀತಿ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ಹಾವೇರಿಯಿಂದ ಪ್ರತಿನಿತ್ಯ 100 ಕಿ.ಮೀ. ವರೆಗೆ ಕ್ರಮಿಸಿ ಅಲ್ಲಿ ಸಿಗುವ ರಾಮಭಕ್ತರ ಮನೆಯಲ್ಲಿ ವಸತಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಒಟ್ಟಾರೆ 2000 ಕಿ.ಮೀ. ಕ್ರಮಿಸಿ ಅಯೋಧ್ಯೆಯ ಶ್ರೀರಾಮನ ದಶ೯ನ ಪಡೆದು ಅಲ್ಲಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಹಾವೇರಿ ಕಡೆಗೆ ಹಿಂತಿರುಗಲಿದ್ದಾರೆ.
ಸದಾಶಿವ ಸ್ವಾಮೀಜಿ ಅವರು ‘ಸಾಧಕ ರತ್ನ’ ಲೋಗೋವನ್ನು ಸೈಕಲ್ಗೆ ಅಳವಡಿಸಿ ಆಶೀರ್ವದಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಕಲಾವಿದ ಗಣೇಶ ರಾಯ್ಕರ, ಪ್ರಭು ಹಿಟ್ನಳ್ಳಿ, ಕಾರ್ತಿಕ್ ಲಂಬಿ, ಧರ್ಮರಾಜ ಖಜ್ಜೂರಕರ್, ಶ್ರವಣ್ ಪಂಡಿತ್, ಮಲ್ಲಿಕಾರ್ಜುನ್ ಇಂಗಳಗಿ, ಗಣೇಶ ಅಜ್ಜನವರ, ಮನೋಜ ವೈದ್ಯ, ಪ್ರಶಾಂತ ದೊಡ್ಡಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.