ADVERTISEMENT

ಹಾವೇರಿ: ಹಳ್ಳಿಯ ಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ ಇಂದು

ಏಳು ತಾಲ್ಲೂಕುಗಳಲ್ಲಿ ತಹಶೀಲ್ದಾರ್‌ಗಳಿಂದ ಗ್ರಾಮವಾಸ್ತವ್ಯ: ಹೊಸನೀರಲಗಿಯಲ್ಲಿ ಸರ್ವ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 14:50 IST
Last Updated 19 ಫೆಬ್ರುವರಿ 2021, 14:50 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ಜನರ ಸಮಸ್ಯೆಗಳ ಆಲಿಸಿ ಅವರ ಮನೆ ಅಂಗಳದಲ್ಲಿ ಸಮಸ್ಯೆಗಳ ನಿವಾರಣೆಯ ಬಹು ನಿರೀಕ್ಷಿತ ‘ಹಳ್ಳಿಯ ಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ’ ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಫೆ.20ರಂದು ಸವಣೂರ ತಾಲ್ಲೂಕಿನ ಹೊಸನೀರಲಗಿ ಗ್ರಾಮದಲ್ಲಿ ನಡೆಯಲಿದೆ.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಗ್ರಾಮ ವಾಸ್ತವ್ಯ ಆರಂಭ ಮಾಡಿ ರಾತ್ರಿ ಅದೇ ಗ್ರಾಮದಲ್ಲಿ ತಂಗಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಗ್ರಾಮ ಪ್ರವೇಶ, ಪರಿಶಿಷ್ಟ ವರ್ಗದ ಕಾಲೊನಿ ಭೇಟಿ, ಚಹಾ ಸೇವನೆ, ನಂತರ ಕಾರ್ಯಕ್ರಮ ನಡೆಯುವ ಶಾಲೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.

ಮಧ್ಯಾಹ್ನ ಊಟ ಮಾಡಿದ ನಂತರ ಅಂಗನವಾಡಿ, ಶಾಲೆಗಳಿಗೆ ಭೇಟಿ, ರಾತ್ರಿ ವಾಸ್ತವ್ಯ ಹೂಡುವುದರ ಮೂಲಕ ಹೊಸನೀರಲಗಿ ಗ್ರಾಮದ ಹಲವು ಸಮಸ್ಯೆಗಳ ನಿವಾರಣೆಯತ್ತ ಗಮನ ಹರಿಸಲಿದ್ದಾರೆ. ಗ್ರಾಮದ ಸಾರ್ವಜನಿಕ ಸಮಸ್ಯೆಗಳು, ಮೂಲ ಸೌಕರ್ಯಗಳ ಕುರಿತಂತೆ ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸವಣೂರ ತಾಲೂಕಾ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ADVERTISEMENT

ಎಲ್ಲೆಲ್ಲಿ ಗ್ರಾಮ ವಾಸ್ತವ್ಯ

ಇದೇ ದಿನ ಜಿಲ್ಲೆಯ ಉಳಿದ ಏಳು ತಾಲ್ಲೂಕುಗಳ ಆಯ್ದ ಗ್ರಾಮಗಳಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಆಯಾ ತಾಲ್ಲೂಕು ವಿವಿಧ ಇಲಾಖಾ ಅಧಿಕಾರಿಗಳು ಗ್ರಾಮ ವಾಸ್ತವ್ಯ ಕೈಗೊಂಡು ಬೆಳಗಿನಿಂದ ಸಂಜೆಯವರೆಗೆ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ.

ಹಾವೇರಿ ತಾಲ್ಲೂಕಿನ ಕೋಳೂರ, ಹಿರೇಕೆರೂರು ತಾಲ್ಲೂಕು ಕೋಡ್ಲ, ರಾಣೆಬೆನ್ನೂರ ತಾಲ್ಲೂಕು ಖಂಡೇರಾಯನಪುರ, ಬ್ಯಾಡಗಿ ತಾಲ್ಲೂಕು ಬಿಸಲಹಳ್ಳಿ, ರಟ್ಟಿಹಳ್ಳಿ ತಾಲ್ಲೂಕು ಲಿಂಗದೇವರಕೊಪ್ಪ, ಶಿಗ್ಗಾವಿ ತಾಲ್ಲೂಕು ಮಮದಾಪುರ, ಹಾನಗಲ್ ತಾಲ್ಲೂಕು ಮಕರವಳ್ಳಿ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.