ಹಾವೇರಿ: ನಗರದ ಹೊರವಲಯದ ನೆಲೋಗಲ್ಲ ಹೆದ್ದಾರಿ ಸೇತುವೆ ಮೇಲಿಂದ ಕೆಳಗೆ ಬಿದ್ದು, ಗಾಯಗೊಂಡಿದ್ದ ಜಿಂಕೆಯನ್ನು ಹೆದ್ದಾರಿ ಗಸ್ತುವಾಹನದ ಪೊಲೀಸ್ ಸಿಬ್ಬಂದಿ, ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಮಂಗಳವಾರ ಮಧ್ಯಾಹ್ನನಾಯಿ ದಾಳಿಯಿಂದ ತಪ್ಪಿಸಿಕೊಳ್ಳುವ ಸಂದರ್ಭ ಜಿಂಕೆ ಸೇತುವೆ ಮೇಲಿಂದ ಹಾರಿ ಕೆಳಗೆ ಬಿದ್ದಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಎಎಸ್ಐ ಎಸ್.ಡಿ.ಸಾಗರ್ ಮತ್ತು ಸಿಬ್ಬಂದಿ ತಮ್ಮ ವಾಹನದಲ್ಲೇ ಜಿಂಕೆಯನ್ನು ತಂದು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
‘ಜಿಂಕೆ ತಲೆಯ ಭಾಗ ಮತ್ತು ಕಾಲುಗಳಿಗೆ ತೀವ್ರ ಗಾಯವಾಗಿದ್ದು, ನಗರದ ಪಶುಸಂಗೋಪನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ನಿತ್ಯ ಚಿಕಿತ್ಸೆ ಅಗತ್ಯವಿದೆ ಎಂದು ಪಶುವೈದ್ಯರು ತಿಳಿಸಿರುವುದರಿಂದ ಪೂರ್ಣ ಗುಣಮುಖವಾಗುವವರೆಗೆ ಕರ್ಜಗಿ ಉಪ ಸಂರಕ್ಷಣಾಧಿಕಾರಿಗಳ ಪ್ರಾದೇಶಿಕ ವಿಭಾಗದ ಕಚೇರಿಯ ಶೆಡ್ನಲ್ಲಿ ಇರಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಉಮರ್ ಬಾಷಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.