ಅಕ್ಕಿಆಲೂರ: ಸ್ಮಶಾನಕ್ಕೆ ಸೂಕ್ತ ನಿವೇಶನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ರಸ್ತೆಯಲ್ಲಿಯೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ ಘಟನೆ ಹಾನಗಲ್ ತಾಲ್ಲೂಕಿನ ಸೋಮಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ತಾಲ್ಲೂಕು ಆಡಳಿತದ ಗಮನ ಸೆಳೆಯುವ ಉದ್ದೇಶದಿಂದ ಗ್ರಾಮಸ್ಥರು ವೃದ್ಧೆಯ ಶವದ ಅಂತ್ಯಸಂಸ್ಕಾರಕ್ಕೆ ನಡು ರಸ್ತೆಯಲ್ಲಿಯೇ ಸಿದ್ಧತೆ ನಡೆಸಿದ್ದರು. ರಸ್ತೆಯ ಮಧ್ಯ ಭಾಗದಲ್ಲಿ ಕಟ್ಟಿಗೆ, ಟೈರ್ ಇಡಲಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಮಶಾನಕ್ಕೆ ಸೂಕ್ತ ನಿವೇಶನದ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವ ಭರವಸೆಯೊಂದಿಗೆ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದರು.
ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ಅಂತ್ಯಸಂಸ್ಕಾರ ನಡೆಸುವುದನ್ನು ಕೈಬಿಟ್ಟ ಗ್ರಾಮಸ್ಥರು, ಅಧಿಕಾರಿಗಳು ನೀಡಿದ ಭರವಸೆ ಈಡೇರಿಸಬೇಕು, ಸಮಸ್ಯೆ ಬೇಗ ಬಗೆಹರಿಯದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.