ಹಾವೇರಿ: ‘ಕೋವಿಡ್ ಕಾರಣದಿಂದ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಂದ ದೂರವಾಗಿರುವುದರಿಂದ ಅವರಲ್ಲಿ ಕಲಿಕಾ ಆಸಕ್ತಿ ತೀವ್ರವಾಗಿ ಕಡಿಮೆಯಾಗಿದೆ. ಪರ್ಯಾಯ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಪುನಃ ಕಲಿಕಾ ಮನೋಭಾವ ಸೃಷ್ಟಿಸಿ’ ಎಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ನಿರ್ದೇಶಕಿ ಮಮತಾ ನಾಯಕ ಹೇಳಿದರು.
ನಗರದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಂತ್ರಿಕ ಸೌಲಭ್ಯ ಹೊಂದಿದ ವಿದ್ಯಾರ್ಥಿಗಳಿಗೆಆನ್ಲೈನ್ ಬೋಧನೆಯನ್ನು ಹಾಗೂ ಯೂಟ್ಯೂಬ್ ಚಾನಲ್ ಹಾಗೂ ದೂರದರ್ಶನ ಚಂದನ ಸಂವೇದ ತರಗತಿಗಳನ್ನು ನಡೆಸಿ ಕಲಿಕಾ ಚಟುವಟಿಕೆಗಳನ್ನು ಆರಂಭಿಸಲು ಶಿಕ್ಷಕರಿಗೆ ಸೂಚಿಸಿದರು.
ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಸಾಕಷ್ಟು ಮುನ್ನಚ್ಚರಿಕೆ ಕ್ರಮಗಳೊಂದಿಗೆ ನಡೆಯುತ್ತಿದ್ದು, ಅದಕ್ಕಾಗಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಅವುಗಳನ್ನು ಸ್ಯಾನಿಟೈಸ್ ಮಾಡಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಮಕ್ಕಳು ಸುರಕ್ಷಿತವಾಗಿ ಪರೀಕ್ಷೆ ಬರೆಯಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಬೇಕು ಎಂದರು.
ಮಳೆಗಾಲ ಆರಂಭವಾಗಿರುವುದರಿಂದ ಶಿಥಿಲವಾಗಿರುವ ಶಾಲಾ ಕೋಣೆ, ಕಾಂಪೌಂಡ್, ಶೌಚಾಲಯಗಳನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳುವುದು ಹಾಗೂ ಈಗಾಗಲೇ ಕೈಗೊಂಡಿರುವ ಸಿವಿಲ್ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಲು ಕಾರ್ಯ ಪ್ರವೃತ್ತರಾಗಲು ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಡಿಪಿಐ ಅಂದಾನಪ್ಪ ವಡಗೇರಿ, ಡಯಟ್ ಪ್ರಾಚಾರ್ಯ ಝಡ್.ಎಂ. ಖಾಜಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್.ಪಾಟೀಲ, ಐ.ಬಿ.ಬೆನಕೊಪ್ಪ, ಗುರುಪ್ರಸಾದ,, ಆರ್.ಎನ್.ಹುರಳಿ, ಪ್ರಭು ಚಿಕ್ಕಮಠ, ರುದ್ರಮುನಿ ಬಿ.ಕೆ., ಸಿದ್ಧಲಿಂಗಪ್ಪ ಎಲ್, ಜಿಲ್ಲಾ ಉಪಸಮನ್ವಯಾಧಿಕಾರಿಗಳಾದ ಎಸ್.ಎಸ್.ಅಡಿಗ ಇದ್ದರು.ಬಿ.ಎಂ.ಬೇವಿನಮರದ ಸ್ವಾಗತಿಸಿದರು. ಮಂಜಪ್ಪ ಆರ್. ನಿರೂಪಿಸಿದರು. ಎನ್. ಶ್ರೀಧರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.