ಹಾವೇರಿ: ದಲಿತರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟನಾತ್ಮಕವಾಗಿ ಜಾಗೃತರಾಗಬೇಕಾಗಿದೆ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಹೇಳಿದರು.
ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆ ಉದ್ಘಾಟನಾ ಸಂಮಾರಂಭದಲ್ಲಿ ಅವರು ಮಾತನಾಡಿದರು.
ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದ ದಲಿತ ಸಮುದಾಯದವರು ಸರ್ಕಾರದ ಸೌಲಭ್ಯ ಪಡೆಯಲು ಶಿಕ್ಷಣ ಪಡೆದು ಜಾಗೃತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ದಲಿತ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಬೇಕು. ನಿಮಗೆ ಏನಾದರೂ ಅನ್ಯಾಯವಾದರೆ ಡಿಎಸ್ಎಸ್ ಸಂಘಟನೆ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಹೇಳಿದರು.
ಶಾಸಕ ಅರುಣಕುಮಾರ ಪೂಜಾರ ಡಿಎಸ್ಎಸ್ ಗ್ರಾಮ ಶಾಖೆ ಉದ್ಘಾಟನೆ ಮಾಡಿ ಮಾತನಾಡಿ, ಸರ್ಕಾರ ತಮಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಬಳಕೆ ಮಾಡಿಕೊಳ್ಳಲು ಶಿಕ್ಷಣ ಮತ್ತು ಸಂಘಟನೆ ಅವಶ್ಯವಾಗಿದೆ. ನಿಮ್ಮ ಊರಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬದ್ದನಾಗಿದ್ದೇನೆ. ತಮ್ಮ ಈ ಸಂಘಟನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಗ್ರಾಮ ಶಾಖೆಯ ಸಂಚಾಲಕರಾಗಿ ಹಾಲೇಸ್ ಸಿ.ಎಚ್., ಉಪಾಧ್ಯಕ್ಷರಾಗಿ ಪರಶುರಾಮ ಎನ್.ಎಚ್. ಸೇರಿದಂತೆ 20ಕ್ಕೂ ಹೆಚ್ಚು ಯುವಕರು ಶಾಖೆಯಲ್ಲಿ ಇದ್ದಾರೆ. ಮುಖಂಡ ಪುಟ್ಟಪ್ಪ ಮರೆಮ್ಮನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಎಸ್ಎಸ್ ಸಂಚಾಲಕ ಮಾಲತೇಶ ಯಲ್ಲಾಪುರ ಜೋಳಪ್ಪ ಕಸವಾಳ, ನಿಂಗಪ್ಪ ಕಡೂರ, ಮಂಜಪ್ಪ ಮರೋಳ ಡಿಎಸ್ಎಸ್ ಕಾರ್ಯಕರ್ತರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.