ADVERTISEMENT

ಹಾವೇರಿ: ದೊಡ್ಡ ಕೆರೆಗಳ ಮೀನುಗಾರಿಕೆಗೆ ಇ–ಟೆಂಡರ್

ಸರ್ಕಾರದಿಂದ ಹೊಸ ಆದೇಶ; ಬಡ ಮೀನುಗಾರರಿಗೆ ಸಂಕಷ್ಟ: ಹೋರಾಟಕ್ಕೆ ಸಿದ್ಧತೆ

ಮಾರುತಿ ಪೇಟಕರ
Published 15 ಜೂನ್ 2025, 5:48 IST
Last Updated 15 ಜೂನ್ 2025, 5:48 IST
ಹಾನಗಲ್‌ ತಾಲ್ಲೂಕಿನಲ್ಲಿ ಕೆರೆಗಳ ಮೀನು
ಹಾನಗಲ್‌ ತಾಲ್ಲೂಕಿನಲ್ಲಿ ಕೆರೆಗಳ ಮೀನು   

ಹಾನಗಲ್: ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ರಾಜ್ಯ ಸರ್ಕಾರ ಆನ್‌ಲೈನ್ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಇದಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ದೊಡ್ಡ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಇಲಾಖೆಯಿಂದಲೇ ಸಹಕಾರಿ ಸಂಘಗಳಿಗೆ ಗುತ್ತಿಗೆ ಮೂಲಕ ಅವಕಾಶ ನೀಡಲಾಗುತ್ತಿತ್ತು. ಈಗ, ಇ–ಟೆಂಡರ್‌ ಮೂಲಕ ಕೆರೆಗಳನ್ನು ಐದು ವರ್ಷದ ಅವಧಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಹಾನಗಲ್ ತಾಲ್ಲೂಕಿನಲ್ಲಿ 9 ಮೀನುಗಾರಿಕೆ ಸಹಕಾರಿ ಸಂಘಗಳಿದ್ದು, ಸರ್ಕಾರದ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಸುಮಾರು 700 ಕೆರೆಗಳಿವೆ. ಸಣ್ಣ ಪ್ರಮಾಣದ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಸಂಬಂಧಿತ ಗ್ರಾಮ ಪಂಚಾಯಿತಿ ಆಡಳಿತ ಅನುಮತಿ ನೀಡುತ್ತದೆ. ದೊಡ್ಡ ಕೆರೆಗಳ ಮೀನು  ಕೃಷಿಯ ಚಟುವಟಿಕೆಗಳನ್ನು ಮೀನುಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತದೆ.

ಮೀನುಗಾರಿಕೆ ಮಹಾ ಮಂಡಳದ ಮಾಜಿ ನಿರ್ದೇಶಕರಾದ ಅಕ್ಕಿಆಲೂರಿನ ಸತ್ತಾರ್‌ಸಾಬ್‌ ಅರಳೇಶ್ವರ, ‘ದೊಡ್ಡ ಕೆರೆಗಳು, ಹಣವಂತರ ಹಿಡಿತಕ್ಕೆ ಸಿಗಲಿವೆ. ಇದರಿಂದ ಬಡ ಮೀನುಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸಂಘಗಳಿಗೆ ಮೀಸಲಾದ ಕೆರೆಗಳನ್ನು ಹೊರತುಪಡಿಸಿ ಬೇರೆ ಕೆರೆಗಳನ್ನು ಇ–ಟೆಂಡರ್‌ ವ್ಯಾಪ್ತಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

ಹಾನಗಲ್‌ನ ವಿಶಾಲ ಕರ್ನಾಟಕ ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಮುನೀರ್‌ಅಹ್ಮದ್‌ ಪಾಳಾ, ‘ಸರ್ಕಾರದ ಹೊಸ ಆದೇಶ, ಸಹಕಾರಿ ಸಂಘಗಳಿಗೆ ಮಾರಕವಾಗಿದೆ. ಗುತ್ತಿಗೆ ಮೊತ್ತವನ್ನು ಹೆಚ್ಚಿಸಿದರೆ ನಾವು ಒಪುತ್ತೇವೆ. ಆದರೆ, ಇ–ಟೆಂಡರ್‌ ಬೇಡ’ ಎಂದು ಆಗ್ರಹಿಸಿದರು. 

ಕೆರೆಯಲ್ಲಿ ಮೀನು ಹಿಡಿಯುತ್ತಿರುವ ಮೀನುಗಾರರು 
ಈಗ ಎರಡು ವರ್ಷದಿಂದ ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳು ಚಾಲನೆಗೊಂಡಿವೆ. ಹೀಗಾಗಿ ಬಹುತೇಕ ಕೆರೆಗಳು ಏತ ನೀರಾವರಿ ವ್ಯಾಪ್ತಿಗೆ ಬರುತ್ತಿವೆ.
– ಎಸ್‌.ಪಿ.ದಂದೂರ, ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ

‘ಇಲಾಖೆ ವ್ಯಾಪ್ತಿಯಲ್ಲಿ 81 ಕೆರೆಗಳು’

‘ಹಾನಗಲ್ ತಾಲ್ಲೂಕಿನಲ್ಲಿ ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ 81 ಕೆರೆಗಳಿವೆ. 9 ಮೀನುಗಾರಿಕೆ ಸಹಕಾರಿ ಸಂಘಗಳಿವೆ. ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಎಸ್‌.ಪಿ.ದಂದೂರ ತಿಳಿಸಿದ್ದಾರೆ.

‘ಸರ್ಕಾರದ ಆದೇಶದ ಪ್ರಕಾರ ಸಂಘಗಳು ಕೂಡ ಏತ ನೀರಾವರಿ ವ್ಯಾಪ್ತಿಯ ಕೆರೆಗಳ ಗುತ್ತಿಗೆ ಪಡೆಯಲು ಇ–ಟೆಂಡರ್‌ನಲ್ಲಿ ಪೈಪೋಟಿ ನಡೆಸಬೇಕು. ಇ–ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ’ ಎಂದರು.  ‘ಪ್ರತಿ ಸಹಕಾರಿ ಸಂಘಕ್ಕೆ ಆ ಭಾಗದ 3 ದೊಡ್ಡ ಕೆರೆಗಳನ್ನು 5 ವರ್ಷದ ಅವಧಿಗೆ ಗುತ್ತಿಗೆ ನೀಡುವ ವ್ಯವಸ್ಥೆಯಿತ್ತು. ಒಂದು ಹೆಕ್ಟೇರ್ ನೀರು ನಿಲ್ಲುವ ಜಲ ವಿಸ್ತೀರ್ಣಕ್ಕೆ ₹ 300 ದರ ನಿಗದಿಯಾಗಿತ್ತು. ಪ್ರತಿ ವರ್ಷ ಮೀನುಗಾರಿಕೆ ಇಲಾಖೆಯಲ್ಲಿ ಶೇ 5ರಷ್ಟು ದರ ಹೆಚ್ಚಿಸಿ ಗುತ್ತಿಗೆಯ ನವೀಕರಣ ಮಾಡಲಾಗುತ್ತಿತ್ತು. ಈಗ ಸರ್ಕಾರದ ಆದೇಶದಂತೆ ಆನ್‌ಲೈನ್‌ ಟೆಂಡರ್‌ನಲ್ಲಿ ಯಾರಾದರೂ ಭಾಗವಹಿಸಿ ಕೆರೆ ಗುತ್ತಿಗೆ ಪಡೆಯಬಹುದು. ಸರ್ಕಾರದ ಕನಿಷ್ಟ ದರ ಪ್ರತಿ ಹೆಕ್ಟೇರ್‌ಗೆ ₹1500 ನಿಗದಿ ಮಾಡಲಾಗಿದೆ’ ಎಂದು ತಾಲ್ಲೂಕಿನ ಬೊಮ್ಮನಹಳ್ಳಿಯ ಭವಾನಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ರಜಪೂತ ಹೇಳಿದರು.

‘ಆದಾಯ ಹೆಚ್ಚಳಕ್ಕೆ ಆದೇಶ‘

‘ಕೆರೆಗಳ ಮೂಲಕ ನಡೆಯುವ ಮೀನುಗಾರಿಕೆಯಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಆದರೆ ಸರ್ಕಾರಕ್ಕೆ ಬರುವ ಆದಾಯ ಮಾತ್ರ ಕಡಿಮೆಯಿದೆ. ಆದಾಯ ಹೆಚ್ಚಳಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ’ ಎಂದು ಮೀನುಗಾರಿಕೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಹೇಳಿದರು.

‘ಹಾವೇರಿಯ ಹೆಗ್ಗೇರಿ ಕೆರೆಯಲ್ಲಿ ಮೀನುಗಾರಿಕೆ ಮಾಡಲು ಕೆರಿಮತ್ತಿಹಳ್ಳಿಯಲ್ಲಿರುವ ಸಂಘಕ್ಕೆ ವಾರ್ಷಿಕ ₹ 18 ಸಾವಿರಕ್ಕೆ ಗುತ್ತಿಗೆ ನೀಡಲಾಗಿತ್ತು. ಕಡಿಮೆ ಮೊತ್ತದ ಗುತ್ತಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದರು. ಜೊತೆಗೆ ದೊಡ್ಡ ಕೆರೆಯ ದರವನ್ನು ಹೆಚ್ಚಿಸಿ ಇಲಾಖೆಗೆ ಆದಾಯ ತರುವಂತೆಯೂ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು’ ಎಂದರು.

‘ದೊಡ್ಡ ಕೆರೆಯಲ್ಲಿ ಮೀನು ಕೃಷಿ ಮಾಡುವುದರಿಂದ ಲಾಭವಿದೆ. ಹಳೇ ದರದಲ್ಲಿ ಗುತ್ತಿಗೆ ನೀಡುವುದರಿಂದ ನಷ್ಟವೆಂಬುದು ಪರಿಶೀಲನೆಯಿಂದ ಗೊತ್ತಾಗಿದೆ. ಇದೇ ಕಾರಣಕ್ಕೆ ಇ–ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.