ADVERTISEMENT

ಪ್ರಚಾರ ಸಾಮಗ್ರಿ ಮುದ್ರಣಕ್ಕೆ ಅನುಮತಿ ಕಡ್ಡಾಯ

ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 14:45 IST
Last Updated 1 ಏಪ್ರಿಲ್ 2023, 14:45 IST
ರಘುನಂದನಮೂರ್ತಿ, ಜಿಲ್ಲಾಧಿಕಾರಿ
ರಘುನಂದನಮೂರ್ತಿ, ಜಿಲ್ಲಾಧಿಕಾರಿ   

ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮುದ್ರಣಾಲಯ ಮಾಲೀಕರು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪ್ರಚಾರ ಸಾಮಗ್ರಿಗಳ ಮುದ್ರಿಸಲು ಹಾಗೂ ಲೋಕಲ್ ಕೇಬಲ್ ಟಿ.ವಿ ಆಪರೇಟರ್‌ಗಳು ಜಾಹೀರಾತುಗಳನ್ನು ಪ್ರಕಟಿಸುವ ಪೂರ್ವದಲ್ಲಿ ಪೂರ್ವಾನುಮತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮುದ್ರಣಾಲಯದ ಮಾಲೀಕರು ಹಾಗೂ ಲೋಕಲ್ ಕೇಬಲ್ ಟಿ.ವಿ ಆಪರೇಟರ್‌ಗಳ ಜೊತೆಗೆ ಸಭೆ ನಡೆದ ಅವರು, ಯಾವುದೇ ರಾಜಕೀಯ ಪಕ್ಷದವರು, ಅಭ್ಯರ್ಥಿ ಮುದ್ರಿಸಿದ ಪ್ರತಿಗಳ ಸಂಖ್ಯೆ ಸಹ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದರು.

ಮುದ್ರಣಕ್ಕೆ ಆದೇಶ ನೀಡಿದ ವ್ಯಕ್ತಿಯಿಂದ ಕಡ್ಡಾಯವಾಗಿ ಒಂದು ಘೋಷಣೆಯನ್ನು ದ್ವಿಪ್ರತಿಯಲ್ಲಿ ಪಡೆದುಕೊಳ್ಳಬೇಕು ಹಾಗೂ ಈ ಘೋಷಣೆಗೆ ಇಬ್ಬರ ಸಾಕ್ಷಿದಾರರ ರುಜು ಪಡೆದುಕೊಳ್ಳಬೇಕು. ಘೋಷಣೆಯನ್ನು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರತಿ ಮುದ್ರಣಾಲದ ಮಾಲೀಕರು ಪಡೆದುಕೊಂಡು ನಂತರ ಮಾಡಿರಬೇಕು. ಮುದ್ರಣ ಮಾಡಿದ ಎರಡು ದಿನದೊಳಗಾಗಿ ಘೋಷಣೆ ಮತ್ತು ಮುದ್ರಿಸಿದ ಪ್ರಚಾರ ಸಾಮಗ್ರಿಯ ಒಂದು ಪ್ರತಿಯೊಂದಿಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ಚುನಾವಣಾ ಕರ್ತವ್ಯ ನಿರತ ಯಾವುದೇ ಅಧಿಕಾರಿ ಮಾಹಿತಿ ಕೇಳಿದಾಗ ತಕ್ಷಣ ನೀಡಬೇಕು ಎಂದರು.

ADVERTISEMENT

ಸ್ಥಳೀಯ ಕೇಬಲ್ ಆಪರೇಟರ್‌ಗಳು ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯು ಜಾಹೀರಾತಿನಲ್ಲಿ ಬಳಸಲಾಗಿರುವ ವಿವರವನ್ನು ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಸಮಿತಿಯಿಂದ ಪೂರ್ವಾನುಮತಿ ಕಡ್ಡಾಯವಾಗಿ ಪಡೆದಿರಬೇಕು. ಕೇಬಲ್ ಆಪರೇಟರ್‌ಗಳು ಈ ರೀತಿ ಪೂರ್ವಾನುಮತಿ ಪಡೆಯದ ಯಾವುದೇ ಜಾಹೀರಾತನ್ನು ಬಿತ್ತರಿಸುವಂತಿಲ್ಲ ಎಂದು ಸೂಚಿಸಿದರು.

‘ಕರಪತ್ರದಲ್ಲಿ ಹೆಸರು ನಮೂದಿಸಿ’

ಮುದ್ರಿಸುವ ಪ್ರತಿ ಕರಪತ್ರಗಳ ಮೇಲೆ ಮುದ್ರಕರ ಮತ್ತು ಮುದ್ರಣಕ್ಕೆ ಆದೇಶ ನೀಡಿದವರ (ಪ್ರಿಂಟರ್‌ ಮತ್ತು ಪಬ್ಲಿಷರ್) ಹೆಸರು ಸ್ಪಷ್ಟವಾಗಿ ಮತ್ತು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಕರಪತ್ರಗಳ ಸಂಖ್ಯೆ ಸಹ ನಮೂದಿಸಬೇಕು. ವಿವರಗಳು ಇಲ್ಲದೆ ಯಾವುದೇ ಕರಪತ್ರ ಮುದ್ರಣ ಚುನಾವಣಾ ಅಪರಾಧವಾಗುತ್ತದೆ. ಯಾವುದೇ ಪತ್ರಿಕಾ ಮುದ್ರಣ ಮಾಲೀಕರಿಗೆ ಮುದ್ರಣಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆ ಉಂಟಾದಲ್ಲಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಮುದ್ರಣಾಲಯದ ಮಾಲೀಕರು ‘ಅನುಬಂಧ–ಎ’ನಲ್ಲಿ ಮಾಹಿತಿ ಪಡೆಯಬೇಕು, ನಂತರ ‘ಅನುಬಂಧ–ಬಿ’ನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ಸಲ್ಲಿಸಬೇಕು. ಈ ನಿಯಮಗಳನ್ನು ಮುದ್ರಣಾಲಯದ ಮಾಲೀಕರು ಹಾಗೂ ಕೇಬಲ್ ಆಪರೇಟರ್‌ಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಅಥವಾ ಉಲ್ಲಂಘನೆಯಾದಲ್ಲಿ ಅಂತರ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆ 1951ನೇದ್ದರ ಪ್ರಕಾಯ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ಚುನಾವಣಾಧಿಕಾರಿಗಳ ಗಮನಕ್ಕೆ ತನ್ನಿ’

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ತಾಲ್ಲೂಕುಗಳಲ್ಲಿ ಹಾಗೂ ಎಲ್ಲ ಸ್ಥಳೀಯ ಕೇಬಲ್ ಆಪರೇಟರ್‌ಗಳು ತಮ್ಮ ವಾಹಿನಿ, ಚಾನಲ್, ಕೇಬಲ್ ನೆಟ್‍ವರ್ಕ್‍ನಲ್ಲಿ ಬಿತ್ತರಿಸಿದ ಎಲ್ಲ ಜಾಹೀರಾತುಗಳ ಮಾಹಿತಿ ಮತ್ತು ಅದಕ್ಕೆ ವಿಧಿಸಲಾಗಿರುವ ವೆಚ್ಚದ ವಿವರವನ್ನು ಕಡ್ಡಾಯವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಹಾಗೂ ಆಯಾ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿ ತರಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.

ಕೇಬಲ್ ಆಪರೇಟರ್‌ಗಳು ವಿದ್ಯುನ್ಮಾನ ಮಾಧ್ಯಮವು ಸೋಷಿಯಲ್ ಮೀಡಿಯಾ ಒಳಗೊಂಡಿರುವುದರಿಂದ ಈ ಸಾಮಾಜಿಕ ಜಾಲತಾಣ (ವೆಬ್‍ಸೈಟ್ ಇತ್ಯಾದಿ)ಗಳಲ್ಲಿ ಬಿತ್ತರಿಸುವ ಅಂಶವು ಸಹ ಎಂ.ಸಿ.ಎಂ.ಸಿ.ಯಿಂದ ಪೂರ್ವಾನುಮತಿ ಪಡೆಯಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ವಿವಿಧ ಮುದ್ರಣಾಲಯಗಳ ಮಾಲೀಕರು, ಸ್ಥಳೀ ಕೇಬಲ್ ಆಪರೇಟರ್‌ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.