ಹಾವೇರಿ: ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆ ಮತ್ತು ಹೆಣ್ಣು ಮಕ್ಕಳಿಗೆ ಪ್ರಾಧಾನ್ಯತೆ ನೀಡಬೇಕು ಹಾಗೂ ಮಹಿಳೆಯರ ಸಬಲೀಕರಣ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಉಪಭಾಗಾಧಿಕಾರಿ ಡಾ.ದಿಲೀಷ್ ಶಶಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾವೇರಿ ಶಿಶು ಅಭಿವೃದ್ಧಿ ಯೋಜನೆ ಕಚೇರಿ ಸಹಯೋಗದಲ್ಲಿ ‘ಮಗಳನ್ನು ಉಳಿಸಿ ಮಗಳನ್ನು ಓದಿಸಿ’ (ಬೇಟಿ ಬಚಾವೋ ಬೇಟಿ ಪಡಾವೋ ) ಯೋಜನೆಯ ಅಂಗವಾಗಿ ಆಯೋಜಿಸಿದ್ದ ಬೀದಿ ನಾಟಕ ಕಾರ್ಯಕ್ರಮಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕುರಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಹೆಣ್ಣು ಮಗುವಿನ ಲಿಂಗಾನುಪಾತವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಟಕ ಪ್ರದರ್ಶಿಸುವುದರ ಮೂಲಕ ಹೆಣ್ಣು ಮಗುವಿನ ರಕ್ಷಣೆಯಕುರಿತಾಗಿ ಅರಿವು ಮೂಡಿಸಲಾಗುವುದು’ ಎಂದು ಹೇಳಿದರು.
ಉಪ ವಿಭಾಗಾಧಿಕಾರಿಗಳು ತಮ್ಮ ವಾಹನಕ್ಕೆ ‘ಬಿಬಿಬಿಪಿ’ ಸ್ಟಿಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಗವಿಸಿದ್ದಪ್ಪ ದ್ಯಾಮಣ್ಣನವರ, ಎಮ್.ಡಿ.ಕಿಚಡೇರ, ಶಿಶು ಅಭಿವೃದ್ಧಿ ಯೋಜನೆಯ ಮಲ್ಲಿಕಾರ್ಜುನ ಕೆಂಪಳ್ಳೆರ, ಶಿಲ್ಪಾ ಸಿದ್ದಮ್ಮನವರ ಇದ್ದರು.
ಬೀದಿ ನಾಟಕ ಮಾಡುವ ಮೂಲಕ ಸ್ನೇಹ ಕಲಾ ತಂಡದವರು ಹೆಣ್ಣು ಭ್ರೂಣ ಹತ್ಯೆ, ಭ್ರೂಣ ಪತ್ತೆ ಹಚ್ಚುವುದು, ಬಾಲ್ಯ ವಿವಾಹ ಇವು ಸಾಮಾಜಿಕ ಪಿಡುಗುಗಳಾಗಿದ್ದು, ಇವುಗಳ ನಿರ್ಮೂಲನೆ ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬೀದಿ ನಾಟಕದ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.