
ರಟ್ಟೀಹಳ್ಳಿ: ತಾಲ್ಲೂಕಿನ ಹಿರೇಕಬ್ಬಾರ ಗ್ರಾಮದ ನಿವೃತ್ತ ಮಾಜಿ ಸೈನಿಕ ಸುರೇಂದ್ರ ಶಿವಪ್ಪ ಹಲಗೇರಿ ಸರ್ಕಾರದಿಂದ ಮಾಜಿ ಸೈನಿಕರಿಗೆ ದೊರೆಯುವ ಉಚಿತ ಜಮೀನು ಪಡೆದುಕೊಳ್ಳುವಲ್ಲಿ ವಿಫಲನಾಗಿ ಸೋಮವಾರ ಪಟ್ಟಣದ ತಹಶೀಲ್ದಾರ ಕಚೇರಿ ಎದುರಿಗೆ ಕುಟುಂಬ ಸಮೇತರಾಗಿ ಬಂದು ಪ್ರತಿಭಟನೆ ನಡೆಸಿದ್ದಾರೆ.
ಸುರೇಂದ್ರ ಶಿವಪ್ಪ ಹಲಗೇರಿ ಅವರು 1980ರಲ್ಲಿ ಸೇನೆ ಸೇರಿ 15 ವರ್ಷಗಳ ಕಾಲ ದೇಶದ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ನಾಸಿಕ್ನಲ್ಲಿ ತರಬೇತಿ ಪಡೆದು ನಂತರ ದೆಹಲಿ, ಕೊಯಿಮತ್ತೂರ, ರಾಯಬರೇಲಿ, ರಾಂಚಿ ಸೇರಿದಂತೆ ಹಲವುಗಡೆ ದೇಶದ ಭದ್ರತೆಗೆ ಹಗಲಿರುಳು ಶ್ರಮಿಸಿದ್ದಾರೆ. ಭಾರತೀಯ ಗಡಿ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರ ನಿವೃತ್ತಿಯಾದ ಇವರಿಗೆ ಸೇನೆಯಿಂದ ಸಿಗಬೇಕಾದ ಎಲ್ಲ ಸೌಕರ್ಯಗಳು ದೊರೆತಿದ್ದು, ನಿವೃತ್ತಿ ನಂತರ ರಾಜ್ಯ ಸರ್ಕಾರ ಮಾಜಿ ಸೈನಿಕರಿಗೆ ನೀಡುವ ಜಮೀನು ಪಡೆದುಕೊಳ್ಳುವಲ್ಲಿ ಪರದಾಡುತ್ತಿದ್ದಾರೆ.
ತಾಲ್ಲೂಕಿನ ಹಿರೇಕಬ್ಬಾರ, ಜೋಕನಾಳ ಗ್ರಾಮದ ಅರಣ್ಯ ಇಲಾಖೆಯ ಜಮೀನನ್ನು ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ, ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿದ್ದಾರೆ. ಆದರೆ, ಆ ಗ್ರಾಮಗಳಲ್ಲಿ ಜಮೀನು ಲಭ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಹಿಂಬಹ ನೀಡಿದ್ದಾರೆ.
ಸರ್ಕಾರ ಹಾಗೂ ಜಿಲ್ಲಾಡಳಿತ ನಿವೃತ್ತ ಸೈನಿಕರಿಗೆ ದೊರೆಯುವ ಜಮೀನು ನೀಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತ ಹಾಗೂ ತಾಲ್ಲೂಕಾಡಳಿತ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.
’ಸದ್ಯ ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಜಮೀನು ಮಂಜೂರು ಆಗುವವರೆಗೂ ಧರಣಿ ಮುಂದುವರೆಸುತ್ತೇನೆ’ ಎಂದರು.
ಮಾಜಿ ಸೈನಿಕ ಕುಟುಂಬ ತಹಶೀಲ್ದಾರ ಕಚೇರಿ ಆವರಣದಲ್ಲಿ ಸೋಮವಾರ ಧರಣಿ ನಡೆಸಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಜಮೀನು ಲಭ್ಯತೆ ನೋಡಿಕೊಂಡು ನಿಯಮಾನುಸಾರ ಮಂಜೂರಾತಿಗೆ ಪ್ರಯತ್ನಿಸಲಾಗುವುದು ಎನ್ನುತ್ತಾರೆ ರಟ್ಟೀಹಳ್ಳಿ ತಹಶೀಲ್ದಾರ ಶ್ವೇತಾ ಅಮರಾವತಿ. ತಹಶೀಲ್ದಾರ ಭರವಸೆ ನಂತರ ಅವರ ತಮ್ಮ ಧರಣಿ ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.