ADVERTISEMENT

ಹಾವೇರಿ: ಕೋಮಾಗೆ ಜಾರಿದ್ದ ಯುವತಿಯ ಅಂಗಾಂಗ ದಾನ

ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 14:00 IST
Last Updated 14 ಸೆಪ್ಟೆಂಬರ್ 2021, 14:00 IST
ಕವನ ಹಿರೇಮಠ
ಕವನ ಹಿರೇಮಠ   

ರಟ್ಟೀಹಳ್ಳಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿ ತಲುಪಿದ್ದ ತಾಲ್ಲೂಕಿನ ಹಳ್ಳೂರು ಗ್ರಾಮದ ಕವನ ಹಿರೇಮಠ (21) ಕುಟುಂಬಸ್ಥರು ಆಕೆಯ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ.

ಚರ್ಮ, ಹೃದಯ, ಕಿಡ್ನಿ, ಕಣ್ಣು, ಲಿವರ್‌ ದಾನ ಮಾಡಲಾಗಿದೆ.

ಈಚೆಗೆ ಶಿಕಾರಿಪುರದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮುಗಿಸಿ ಸ್ವಗ್ರಾಮ ಹಳ್ಳೂರಿಗೆ ಮರಳುವ ಮಾರ್ಗ ಮಧ್ಯ ಸೊರಟೂರ ಸಮೀಪ ಮಾರುತಿ ಓಮಿನಿಯು ಎತ್ತಿನಗಾಡಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ADVERTISEMENT

ಎತ್ತಿನಗಾಡಿಯಲ್ಲಿದ್ದ ಪತಿ, ಪತ್ನಿ ಹಾಗೂ ಎರಡು ಎತ್ತುಗಳು ಸ್ಥಳದಲ್ಲಿಯೇ ಮೃತಪಟ್ಟವು. ಓಮಿನಿಯಲ್ಲಿ ಪ್ರಯಾಣಿಸುತ್ತಿದ್ದ ಕವನಾ, ರೂಪಾ ಬುಳ್ಳಾಪುರ, ಶಶಿಕಲಾ ಬಾರ್ಕಿ, ಕವಿತಾ ಜಿನ್ನಳ್ಳಿ, ಶ್ರುತಿ ಮುದೇನೂರು ತೀವ್ರ ಗಾಯಗೊಂಡಿದ್ದರು.

ಚೈತ್ರ ಕೆಂಗಣ್ಣನವರ ಸ್ಥಳದಲ್ಲಿಯೇ ಮೃತಪಟ್ಟರು.‌ ತೀವ್ರವಾಗಿ ಗಾಯಗೊಂಡಿದ್ದ ಕವನಳನ್ನು ಸೊರಟೂರು ಗ್ರಾಮಸ್ಥರು ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟರು. ಅಲ್ಲಿಂದ ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.

ಬದುಕಿದರೂ ಜೀವಂತ ಶವವಾಗಿರುತ್ತಾಳೆ ಎಂದು ತಿಳಿದ ಕವನಾಳ ತಾಯಿ, ಸಹೋದರಿ, ಸೋದರಮಾವ ಆಕೆಯ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಭಾನುವಾರ ಅಂತ್ಯಸಂಸ್ಕಾರ ಹಳ್ಳೂರಿನಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.