ADVERTISEMENT

ಚುನಾವಣೆ: 224 ಕ್ಷೇತ್ರಗಳಲ್ಲಿ ರೈತ ಸಂಘ ಸ್ಪರ್ಧೆ: ಬಸವರಾಜ ಕರಿಗಾರ

ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 14:17 IST
Last Updated 23 ಜನವರಿ 2023, 14:17 IST
ಬಸವರಾಜ ಕರಿಗಾರ 
ಬಸವರಾಜ ಕರಿಗಾರ    

ಹಾವೇರಿ: ‘2023ನೇ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದಿಂದ 224 ಮತಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ತೀರ್ಮಾನಿಸಲಾಗಿದೆ. ಫೆಬ್ರುವರಿ 20ರೊಳಗೆ ಮೊದಲನೇ ಹಂತದ 80 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವೋಟು, ನೋಟು ಮತ್ತು ರೊಟ್ಟಿ ಎಂಬ ಮೂರು ಜೋಳಿಗೆಗಳನ್ನು ಹಿಡಿದು ಪ್ರಚಾರ ಕೈಗೊಳ್ಳುತ್ತೇವೆ. ರೈತ ಸಂಘದವರನ್ನು ಬೆಂಬಲಿಸಿ ಜನರು ನೀಡುವ ರೊಟ್ಟಿಗಳಿಂದ ನಮಗೆ ಎಷ್ಟು ಮತಗಳು ಸಿಗುತ್ತವೆ ಎಂಬುದು ಖಾತ್ರಿಯಾಗುತ್ತದೆ. ಜನರು ನೀಡುವ ಕಾಸಿನಿಂದ ಪ್ರಚಾರ ಕಾರ್ಯ ನಡೆಸುತ್ತೇವೆ ಎಂದು ಹೇಳಿದರು.

ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿದಂತೆ ಯಾವ ಪಕ್ಷಗಳೂ ರೈತರ ಪರವಾಗಿ ಕೆಲಸ ಮಾಡಲಿಲ್ಲ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನಿಗದಿತ ಬೆಲೆ ಕೊಟ್ಟಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಇಂಧನ ಮತ್ತು ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಹೀಗಾಗಿ ರೈತರೇ ಶಾಸಕರಾಗಬೇಕು ಎಂಬ ಉದ್ದೇಶದಿಂದ ರೈತ ಸಂಘ ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುತ್ತಿದೆ ಎಂದರು.

ADVERTISEMENT

ದೇಶದಲ್ಲಿ ಶೇ 80ರಷ್ಟ ರೈತರಿದ್ದು, ಒಗ್ಗಟ್ಟು ಇಲ್ಲದ ಕಾರಣ ಬೇರೆ ಬೇರೆ ಪಕ್ಷಗಳ ಜೊತೆಗೆ ಗುರುತಿಸಿಕೊಂಡಿದ್ದರು. ಈಗ ನಮ್ಮ ಸಂಘಟನೆ ಪ್ರತಿ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ನಮ್ಮ ಸಂಘಟನೆಗೆ ರಾಜ್ಯದಲ್ಲಿ 8.5 ಲಕ್ಷ ಸದಸ್ಯರು ಇದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಮಾರುತೆಪ್ಪ ಲತ್ತಿ, ಆನಂದ ಜಕಾತಿ, ಪೀರಾ ದಾಂಡೇಲಿ, ಫಕ್ಕೀರಗೌಡ ಗಾಜಿಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.