ಹಾವೇರಿ: ‘ವಿಚಾರಣೆಗೆ ಕರೆದಿದ್ದ ಉಪವಿಭಾಗಾಧಿಕಾರಿಗಳೇ ಕಚೇರಿಯಲ್ಲಿಲ್ಲ’ ಎಂದು ಆರೋಪಿಸಿದ ರಟ್ಟೀಹಳ್ಳಿ ತಾಲ್ಲೂಕಿನ ನಾಗವಂದ ಗ್ರಾಮದ ರೈತರು, ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂದೆ ನೋಟಿಸ್ ಪ್ರತಿ ಪ್ರದರ್ಶಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ತುಂಗಭದ್ರಾ ನದಿ ನೀರಿನಿಂದ ಉಡಗಣಿ, ತಲಗುಂದ, ಹೊಸೂರು ಹೋಬಳಿಗಳ ಕೆರೆ ತುಂಬಿಸುವ ಯೋಜನೆಯಡಿ ಬರುವ ಮುಖ್ಯ ಕೊಳವೆ ಮಾರ್ಗ ಮತ್ತು ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡುವ ಸಂಬಂಧ ನಾಗವಂದ ಗ್ರಾಮದ ಹಲವಾರು ರೈತರಿಗೆ ನೋಟಿಸ್ ನೀಡಲಾಗಿದೆ. ಏಕಾಏಕಿ ನೋಟಿಸ್ ನೀಡಿ ನಮ್ಮ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮ ಭೂಮಿ ನಮ್ಮ ಹಕ್ಕು’ ಹಾಗಾಗಿ ನಮ್ಮ ತುಂಡು ಭೂಮಿಗಳನ್ನು ಯೋಜನೆಗೆ ಕೊಡುವುದಿಲ್ಲ. ಪಕ್ಕದಲ್ಲೇ ಇರುವ ಸರ್ಕಾರಿ ಜಮೀನಿನಲ್ಲಿ ಕೊಳವೆ ಮಾರ್ಗ ಕಾಮಗಾರಿ ನಡೆಸಲಿ ಎಂದು ಆಗ್ರಹಿಸಿದರು.
ರೈತರ ಆಕ್ಷೇಪಣೆ ಕೇಳಲು ಸೋಮವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ನಿಗದಿಪಡಿಸಲಾಗಿತ್ತು. ರಟ್ಟೀಹಳ್ಳಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನಾ ಸ್ಥಳಕ್ಕೆ ಡಾ.ದಿಲೀಷ್ ಶಶಿ ಅವರು ಹೋಗಿದ್ದ ಕಾರಣ, ಮಧ್ಯಾಹ್ನದ ನಂತರ ವಿಚಾರಣೆ ನಡೆಸಲಾಯಿತು ಎಂದು ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.