ಹಾವೇರಿ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ಸಂಘದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ವತಿಯಿಂದ ರೈತರು ನಗರದ ರೈಲ್ವೆ ಸ್ಟೇಷನ್ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ದೆಹಲಿಯಲ್ಲಿ ನಿರಂತರವಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಕಾಯ್ದೆ ಹಿಂಪಡೆಯಲು ಕೇಂದ್ರ ಸರ್ಕಾರ ಮನಸು ಮಾಡುತ್ತಿಲ್ಲ. ಅನ್ನದಾತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಜಲಫಿರಂಗಿ, ಅಶ್ರುವಾಯು, ಲಾರಿಚಾರ್ಜ್ ಮೂಲಕ ರೈತರ ಹೋರಾಟವನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರೈಲು ತಡೆ ಚಳವಳಿ’ ಹೋರಾಟ ಹಮ್ಮಿಕೊಂಡಿದ್ದ ರೈತರು ರೈಲು ತಡೆಯಲು ರೈಲ್ವೆ ನಿಲ್ದಾಣ ಪ್ರವೇಶಿಸಲು ಮುಂದಾದರು. ಆ ವೇಳೆ ಸ್ಥಳದಲ್ಲಿದ್ದ ಪೊಲೀಸರು ರೈತರನ್ನು ತಡೆದು, 25 ಮಂದಿ ವಶಕ್ಕೆ ಪಡೆದುಕೊಂಡು ವಾಹನದಲ್ಲಿ ಕರೆದೊಯ್ದರು.
ಪ್ರತಿಭಟನೆಯಲ್ಲಿ ಎಂ.ಎನ್.ನಾಯಕ್, ರಾಜು ತರ್ಲಘಟ್ಟ, ಹನುಮಂತಪ್ಪ ಹುಚ್ಚಣ್ಣವರ, ಮುತ್ತು ಗುಡ್ಡಗೇರಿ, ರಮೇಶ ಹೆಸರೂರು, ಜಾಕಿರ್ ಅರಳಿಮರದ, ಜಗದೀಶ ಬಳ್ಳಾರಿ, ವೀರಭದ್ರಪ್ಪ ಅಗಡಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.