
ಶಿಗ್ಗಾವಿ: ತಾಲ್ಲೂಕಿನಲ್ಲಿನ ವಿದ್ಯುತ್ ಸಮಸ್ಯೆ, ಬೆಳೆಗಳಿಗೆ ಬೆಲೆ ನಿಗದಿ, ಬೆಳೆ ಹಾನಿ ಪರಿಹಾರ ಧನ ವಿತರಿಸಬೇಕು ಎಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ಎಸ್ಪಿ) ಭಾರತೀಯ ಕೃಷಿಕ ಸಮಾಜ ತಾಲ್ಲೂಕು ಘಟಕದ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮೆರವಣಿಗೆ ನಡೆಸಿದರು.
ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣೆಗೆ ಪುರಸಭೆ ವೃತ್ತ, ಸಂತೆ ಮೈದಾನ, ಪೇಟೆ ರಸ್ತೆ, ಹಳೆ ಬಸ್ ನಿಲ್ದಾನ್, ಪಿಎಲ್.ಡಿ ಬ್ಯಾಂಕ್ ವೃತ್ತ, ಅಂಚೆ ಕಚೇರಿ, ಹೆದ್ದಾರಿ ಮೇಲ್ಸೇತುವೆ, ಕೃಷಿ ಮಾರುಕಟ್ಟೆ ವರೆಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ರೈತರ ಸಮಸ್ಯೆಗೆ ಸರ್ಕಾರ ನೆರವಾಗಬೇಕು. ಆತನ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿ, ಪ್ರಸಕ್ತ ವರ್ಷದ ಮುಂಗಾರು, ಹಿಂಗಾರು ಬೆಳೆಗಳು ಅತೀಯಾದ ಮಳೆಯಿಂದ ಸಂಪೂರ್ಣ ಹಾನಿಯಾಗಿವೆ. ಅದರಿಂದ ಇಡೀ ತಾಲ್ಲೂಕಿನ ರೈತನ ಬದುಕು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೆರವಿಗಾಗಿ ಮುಂದಾಗಬೇಕು. ರೈತ ಉಳಿದರೆ ಮಾತ್ರ ಇತರರು ಉಳಿಯಲು ಸಾಧ್ಯವಿದೆ. ಹೀಗಾಗಿ ರೈತರನ್ನು ಉತ್ತೇಜಿಸುವ ಕಾರ್ಯ ಮುಖ್ಯವಾಗಿದೆ ಎಂದರು.
ನಂತರ ಶಿರಸ್ತೇದಾರ್ ವಿಶ್ವನಾಥ ತತ್ತಿ ಅವರಿಗೆ ಮನಿ ಸಲ್ಲಿಸಿದರು. ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರಾಜ್ಯ ಘಟಕದ ಅಧ್ಯಕ್ಷ ಸಿದ್ದನಗೌಡ ಮೂದಗಿ, ರಾಜ್ಯ ಉಪಾಧ್ಯಕ್ಷ ಭರಮಗೌಡ ರಾಮನಗೌಡ್ರ, ಜಿಲ್ಲಾ ಅಧ್ಯಕ್ಷ ಶಿವಾನಂದ ಕರಿಗಾರ, ತಾಲ್ಲೂಕು ಘಟಕದ ಬಸನಗೌಡ ಮೇಗಳಮನಿ, ಕೆಆರ್.ಎಸ್ ತಾಲ್ಲೂಕು ಅಧ್ಯಕ್ಷ ದೇವೆಂದ್ರಪ್ಪ ತಳವಾರ, ಶಶಿಧರ ಹೊಣ್ಣನವರ, ಬಸವರಾಜ ಗೊಬ್ಬಿ, ಶಂಕರಗೌಡ ಪಾಟೀಲ, ರತ್ನವ್ವ ಬನ್ನಿಕೊಪ್ಪ, ಯಲ್ಲಮ್ಮಾ ಬಾರಕೇರ ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.