ಹಾವೇರಿ: ಇಲ್ಲಿನ ಬಸವೇಶ್ವರ ನಗರದ 12ನೇ ಅಡ್ಡರಸ್ತೆಯಲ್ಲಿರುವವಿಶ್ವಭಾರತಿ ಆಂಗ್ಲ ಮಾಧ್ಯಮ ಶಾಲೆ ಈ ಶೈಕ್ಷಣಿಕ ವರ್ಷದಲ್ಲಿ ಮುಚ್ಚುವ ಸಂಭವ ಇದೆ. ಆದ್ದರಿಂದ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.
ನಮ್ಮ ಮಕ್ಕಳು ಎಲ್.ಕೆ.ಜಿ.ಯಿಂದ 3ನೇ ತರಗತಿಯವರೆಗೆ ಸರ್ಕಾರದ ಆರ್ಟಿಇ ಅಡಿ ಪ್ರವೇಶ ಪಡೆದು ಶಿಕ್ಷಣ ಕಲಿಯುತ್ತಿದ್ದರು. ಆದರೆ ಆಡಳಿತ ಮಡಳಿಯವರು ಶಾಲೆ ಮುಚ್ಚುವ ತೀರ್ಮಾನ ಮಾಡಿದ್ದಾರಂತೆ. ಹಾಗಾದರೆ ನಮ್ಮ ಮಕ್ಕಳು ಉಚಿತವಾಗಿ ಲಭ್ಯವಾಗಿರುವ ಶಿಕ್ಷಣವನ್ನು ಮುಂದೆ ನಮಗೆ ಯಾರು ನೀಡುವರು? ಆಂಗ್ಲ ಮಾಧ್ಯಮ ಎಂದು ಈ ಶಾಲೆಗೆ ಸೇರಿಸಲಾಗಿತ್ತು. ದಿಢೀರನೆ ಶಾಲೆ ಮುಚ್ಚಿದರೆ ಮಕ್ಕಳ ಶಿಕ್ಷಣ ಪಡೆಯುವುದು ಹೇಗೆ? ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಬಡ ಕುಟುಂಬವರಾದ ನಮಗೆ ಆರ್ಟಿಇ ಅಡಿ ಪ್ರವೇಶ ಪಡೆದಿರುವುದು ಅನುಕೂಲವಾಗಿತ್ತು. ಅಧಿಕಾರಿಗಳು ನಮ್ಮ ಮಕ್ಕಳಿಗೆ ಪರ್ಯಾಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪಾಲಕರು ಒತ್ತಾಯಿಸಿದರು.
ಪಾಲಕರಾದ ಶಿವಪ್ಪ ಲಮಾಣಿ, ಪ್ರಕಾಶ ಹಲಗಲಿ, ಅನ್ವರಸಾಬ್ ಮಕಾಂದರ, ಮಾಲತೇಶ ಕೋಡಿಹಳ್ಳಿ, ಕಲ್ಪನಾ ಗೌಡರ, ಮಾಬುಸಾಬ ಅಜ್ಜಪ್ಪ ದೊಡತೇಬಾರ, ಬಾಬುಸಾಬ ಸೌದಗರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.