ADVERTISEMENT

ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 16:22 IST
Last Updated 25 ಆಗಸ್ಟ್ 2024, 16:22 IST
ಗುತ್ತಲದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನಿವೃತ್ತ ಶಿಕ್ಷಕ ಪಾಲಾಕ್ಷಯ್ಯ ನೆಗಳೂರಮಠ ಅವರ ಅಭಿನಂದನಾ ಸಮಾರಂಭದಲ್ಲಿ ನೆಗಳೂರಮಠ ದಂಪತಿಯನ್ನು ಸನ್ಮಾನಿಸಲಾಯಿತು
ಗುತ್ತಲದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನಿವೃತ್ತ ಶಿಕ್ಷಕ ಪಾಲಾಕ್ಷಯ್ಯ ನೆಗಳೂರಮಠ ಅವರ ಅಭಿನಂದನಾ ಸಮಾರಂಭದಲ್ಲಿ ನೆಗಳೂರಮಠ ದಂಪತಿಯನ್ನು ಸನ್ಮಾನಿಸಲಾಯಿತು   

ಗುತ್ತಲ: ‘ಸಮಾಜಮುಖಿ, ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಸಮಾಜ ಯಾವತ್ತೂ ಋಣಿಯಾಗಿರುತ್ತದೆ ಎಂಬುದಕ್ಕೆ ಕಳೆದ ತಿಂಗಳು ಸೇವಾ ನಿವೃತ್ತಿಯಾದ ಪಾಲಾಕ್ಷಯ್ಯ ನೆಗಳೂರಮಠ ಅವರು ಜ್ವಲಂತ ಉದಾಹರಣೆ’ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಿವೃತ್ತ ಶಿಕ್ಷಕ ಪಾಲಾಕ್ಷಯ್ಯ ನೆಗಳೂರಮಠ ಅವರ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸುದೀರ್ಘ 41 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಕತ್ತೆಬೆನ್ನೂರ ಗ್ರಾಮದಲ್ಲಿ ಸೇವೆ ಸಲ್ಲಿಸಿ ಅಲ್ಲಿನ ಸಾವಿರಾರು ಶಿಷ್ಯಬಳಗಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದ ಪಾಲಾಕ್ಷಯ್ಯ ಅನೇಕ ಬಡ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ಶಾಲಾ ಶುಲ್ಕವನ್ನು ಕಟ್ಟಿ ಶಿಕ್ಷಣ ನೀಡಿದವರು. ಅನೇಕ ಬಡ ಮಕ್ಕಳಿಗೆ ದಾರಿ ದೀಪವಾಗಿದ್ದು, ಅವರ ನಿಸ್ವಾರ್ಥ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಅವರ ಇಡೀ ಕುಟುಂಬ ಕಲಾಸೇವೆಯಲ್ಲಿ ನಿರತರಾಗಿದ್ದು ಅನೇಕರಿಗೆ ಅನ್ನ ಹಾಗೂ ಅಕ್ಷರ ನೀಡಿದ ಶ್ರೇಯ ಅವರ ಕುಟುಂಬಕ್ಕೆ ಸಲ್ಲುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಜಂಗಮಕ್ಷೇತ್ರ ಲಿಂಗನಾಯಕಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, 60ಕ್ಕೆ ವಯೋನಿವೃತ್ತಿ ಹೊಂದಿದರೂ ಸಹ ಪಾಲಾಕ್ಷಯ್ಯ ಅವರ ಮನಸ್ಸು 6 ವರ್ಷದ ಮುಗ್ದ ಮಗುವಿನಂತೆ. ಅವರ ನಿವೃತ್ತಿ ಜೀವನ ಸುಖ ಮಯವಾಗಿರಲಿ ಎಂದು ಹಾರೈಸಿದರು.

ADVERTISEMENT

ತಹಸೀಲ್ದಾರ್‌ ಶಂಕರ ಜಿ.ಎಸ್.ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ.ಕುರವತ್ತಿಗೌಡರ, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಸಂಗಯ್ಯಸ್ವಾಮಿ ಭೂಸನೂರಮಠ, ಬಸವರಾಜ ಕೆಂಚಮಲ್ಲ, ಪ.ಪಂ ಸದಸ್ಯರಾದ ಪ್ರದೀಪ ಸಾಲಗೇರಿ, ಮಹ್ಮದ ಹನೀಫ ರಿತ್ತಿ, ಚನ್ನಪ್ಪ ಕಲಾಲ ಇದ್ದರು.

ಹುಬ್ಬಳ್ಳಿಯ ಕಸವಿ ಚಂದ್ರಕುಮಾರ ಗಾಣಗೇರ ಅವರ ಭರತನಾಟ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಸ್ವಾಮಿ ಕರೋಕೆ ತಂಡದ ಸದಸ್ಯರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.