
ಮೆಣಸಿನಕಾಯಿ ವ್ಯಾಪಾರಿ ವಿರುದ್ಧ ಎಫ್ಐಆರ್
ಹಾವೇರಿ: ‘ಬ್ಯಾಡಗಿಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಪ್ರಗತಿ ಎಂಟರ್ಪ್ರೈಸಸ್ ಕಂಪನಿ ಮಾಲೀಕ ಕಲ್ಲಪ್ಪ ಬಸಪ್ಪ ಆಡಿನವರ ಅವರು ಮೆಣಸಿನಕಾಯಿ ವ್ಯವಹಾರದಲ್ಲಿ ನನಗೆ ಸುಮಾರು ₹ 7 ಲಕ್ಷ ವಂಚನೆ ಮಾಡಿದ್ದಾರೆ’ ಎಂದು ಆರೋಪಿಸಿ ಆಂಧ್ರಪ್ರದೇಶದ ರೈತ ಕುರುವ ಚಂದ್ರಣ್ಣ ಭೀಮಣ್ಣ ಎಂಬುವವರು ಬ್ಯಾಡಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘2024ರ ಫೆಬ್ರುವರಿಯಿಂದ 2026ರ ಜನವರಿ ಒಳಗಿನ ಅವಧಿಯಲ್ಲಿ ನಡೆದಿದೆ ಎನ್ನಲಾದ ವಂಚನೆ ಬಗ್ಗೆ ರೈತ ಕುರುವ ಚಂದ್ರಣ್ಣ ದೂರು ನೀಡಿದ್ದಾರೆ. ಪ್ರಗತಿ ಎಂಟರ್ಪ್ರೈಸಸ್ ಕಂಪನಿ ಮಾಲೀಕ ಕಲ್ಲಪ್ಪ ಬಸಪ್ಪ ಆಡಿನವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ರೈತ, ಮೆಣಸಿನಕಾಯಿಯ 62 ಚೀಲಗಳನ್ನು ಆರೋಪಿಗೆ ನೀಡಿದ್ದರು. ದರ ಕಡಿಮೆ ಇರುವುದಾಗಿ ಹೇಳಿದ್ದ ಆರೋಪಿ, ಅದನ್ನು ಗೋದಾಮಿನಲ್ಲಿ ಇರಿಸಿದ್ದ. ದರ ಹೆಚ್ಚಾದ ದಿನಗಳಲ್ಲಿ ಮಾರಾಟ ಮಾಡುವುದಾಗಿ ಭರವಸೆ ನೀಡಿದ್ದ. ಅದರ ರಶೀದಿಯನ್ನೂ ತಾನೇ ಇಟ್ಟುಕೊಂಡಿದ್ದ. ಇತ್ತೀಚೆಗೆ ರೈತರ ಗಮನಕ್ಕೆ ಬಾರದಂತೆ, 30 ಕೆ.ಜಿ. ತೂಕದ 62 ಮೆಣಸಿನಕಾಯಿ ಚೀಲಗಳನ್ನು ಆರೋಪಿ ಮಾರಿದ್ದಾನೆ. ಇದರಿಂದ ರೈತನಿಗೆ ನಷ್ಟವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.