ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಹಾಕಿದ್ದ ಮೆಕ್ಕೆಜೋಳದ ರಾಶಿಗೆ ಬೆಂಕಿ ತಗುಲಿ ಅವಘಡ ಸಂಭವಿಸಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅಂಗರಗಟ್ಟಿ ಗ್ರಾಮದ ನಿವಾಸಿ ನಾಗರಾಜ ಗುಡ್ಡಪ್ಪ ಹಾದಿಮನಿ ಎಂಬುವವರಿಗೆ ಸೇರಿದ್ದ ಮೆಕ್ಕೆಜೋಳದ ರಾಶಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಿಂದಾಗಿ ₹ 6.50 ಲಕ್ಷ ನಷ್ಟವಾಗಿದ್ದು, ನಾಗರಾಜ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಬ್ಯಾಡಗಿ ಪೊಲೀಸರು ಹೇಳಿದರು.
‘ರೈತ ನಾಗರಾಜ ಅವರು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 12 ಎಕರೆ 37 ಗುಂಟೆಯಲ್ಲಿ ಮೆಕ್ಕೆಜೋಳ ಬೆಳೆ ಬೆಳೆದಿದ್ದರು. ಅದೇ ಬೆಳೆಯನ್ನು 8 ದಿನಗಳ ಹಿಂದೆಯಷ್ಟೇ ಕಟಾವು ಮಾಡಿದ್ದ ಅವರು, ಜಮೀನಿನಲ್ಲಿಯೇ ತೆನೆಗಳನ್ನು ರಾಶಿ ಮಾಡಿದ್ದರು. ಅಕ್ಟೋಬರ್ 12ರಂದು ಮಧ್ಯಾಹ್ನ 2 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಮೆಕ್ಕೆಜೋಳ ತೆನೆಯ ರಾಶಿಗೆ ಬೆಂಕಿ ತಗುಲಿತ್ತು. ಕೆಲ ನಿಮಿಷಗಳಲ್ಲಿಯೇ ಇಡೀ ರಾಶಿ ಸುಟ್ಟು ಕರಕಲಾಗಿದೆ’ ಎಂದು ತಿಳಿಸಿದರು.
‘ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.