ಹಾವೇರಿ:ರಾಜಕೀಯ ಅನಿಶ್ಚಿತತೆಯಿಂದ ವಾಣಿಜ್ಯೋದ್ಯಮ ಸೇರಿದಂತೆ ಎಲ್ಲ ಅಭಿವೃದ್ಧಿಗಳು ಕುಂಠಿತವಾಗುತ್ತಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಅಭಿಪ್ರಾಯ ಪಟ್ಟರು.
ರಾಜಕೀಯ ಅನಿಶ್ಚಿತತೆ ಎಂದರೆ ಸಮ್ಮಿಶ್ರ ಸರ್ಕಾರವಲ್ಲ. ಸರ್ಕಾರದ ಕುರಿತು ರಾಜಕೀಯವಾಗಿ ಸೃಷ್ಟಿಸುವ ಅಸ್ಥಿರತೆಗಳು ಎಂದು ಸ್ಪಷ್ಟಪಡಿಸಿದ ಅವರು, ವಾಜಪೇಯಿ, ಮನಮೋಹನ್ ಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ದಿಗೆ ಅಡ್ಡಿಯಾಗಿರಲಿಲ್ಲ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅನಿಶ್ಚಿತತೆ ಸೃಷಿಯಾದರೆ ಅಧಿಕಾರಿಗಳು ನಿರುತ್ಸಾಹಿಗಳಾಗಿ, ‘ಅನುಷ್ಠಾನ’ ವಿಫಲಗೊಳ್ಳುತ್ತದೆ. ಸರ್ಕಾರ ಯೋಜನೆ ನೀಡಿದರೂ, ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ವಿಶ್ಲೇಷಿಸಿದರು.
ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಟ್ರೇಡ್ ಲೈಸನ್ಸ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯಿದೆಯ ಕಲಂ 35 ಬಿ ಅನ್ನು ರದ್ದು ಪಡಿಸಬೇಕು. ಎಪಿಎಂಸಿಯ ಶೇ 0.5 ಸೆಸ್ (ಆವರ್ತ ನಿಧಿ) ಅನ್ನು ತೆಗೆದು ಹಾಕಬೇಕು. ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಸಲ್ಲಿಕೆಯ ತಾಂತ್ರಿಕತೆಯನ್ನು ಸರಳೀಕರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಾಲದ ಸಮಸ್ಯೆ ಇದ್ದು, ₹5 ಕೋಟಿ ತನಕದ ಸಲ್ಲಿಕೆಗೆ ಹೆಚ್ಚುವರಿ ಐದು ದಿನಗಳನ್ನು ನೀಡಬೇಕು ಎಂಬ ನಿರ್ಣಯವನ್ನು ಇಲ್ಲಿ ನಡೆದ ಮಹಾಸಂಸ್ಥೆಯ ಸಭೆಯು ಅಂಗೀಕರಿಸಿದೆ ಎಂದರು.
ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗದ ಜೊತೆ ಉದ್ಯಮಶೀಲತೆಗೆ ಪ್ರೋತ್ಸಾಹ, ಮೂಲಸೌಕರ್ಯ ವೃದ್ಧಿ, ಬ್ಯಾಂಕಿಂಗ್ ವಲಯದಿಂದ ಸ್ಪಂದನೆ, ಈ ನಿಟ್ಟಿನ ರಾಜಕೀಯ ಇಚ್ಛಾಶಕ್ತಿಯ ಪ್ರದರ್ಶನ, ಕೈಗಾರಿಕಾ ಕ್ಲಸ್ಟರ್ಗಳ ಅಭಿವೃದ್ಧಿ, ಸರ್ಕಾರದ ಔದ್ಯಮಿಕ ಯೋಜನೆಗಳ ಪ್ರಚಾರ ಕಾರ್ಯಗಳಿಗೆ ಒತ್ತು ನೀಡಬೇಕು ಎಂಬುದು ನಮ್ಮ ಬೇಡಿಕೆ ಎಂದರು.
ನಿಮ್ಮ ಇಚ್ಛಾಶಕ್ತಿ ಹಾಗೂ ಕ್ರಿಯಾಯೋಜನೆಯು ಯಶಸ್ವಿ ಉದ್ಯಮಿಯನ್ನು ಸೃಷ್ಟಿಸಬಹುದೇ ಹೊರತು, ಸರ್ಕಾರದ ಯೋಜನೆಗಳು ಹಾಗೂ ರಿಯಾಯಿತಿಗಳು ನಿಮ್ಮನ್ನು ಸೋಮಾರಿಗಳನ್ನಾಗಿ ಮಾಡಬಹುದಷ್ಟೇ ಎಂದು ವರ್ತಕ, ಉದ್ಯಮಿಗಳಿಗೆ ಕಿವಿಮಾತು ಹೇಳಿದರು.
ಮಹಾಸಂಸ್ಥೆಯ ಜನಾರ್ದನ, ಯಶವಂತರಾಜ್, ಹಾವೇರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಆರ್.ಎಸ್. ಮಾಗನೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.