ಹಾವೇರಿ: ‘ಹೆಣ್ಣುಮಕ್ಕಳ ಸಬಲೀಕರಣಕ್ಕೆ ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯ ತಾಂತ್ರಿಕತೆಗಳು ಮಹತ್ತರ ಪಾತ್ರ ವಹಿಸುತ್ತವೆ’ ಎಂದು ತೋಟಗಾರಿಕೆ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ಡೀನ್ ಡಾ.ಎಲ್.ಎನ್. ಹೆಗಡೆ ಹೇಳಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಬರುವ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ದೇವಿಹೊಸೂರ ವತಿಯಿಂದ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಘಟಕದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳೆಯರಿಗಾಗಿ ಒಂದು ದಿನದ ಮಹಿಳಾ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಹಾರ ಮೌಲ್ಯವರ್ಧನೆಯು ಹೆಣ್ಣು ಮಕ್ಕಳ ಸಂಘ ಸಂಸ್ಥೆಗಳಿಗೆ ಒಂದು ವರದಾನ. ಈ ತರಬೇತಿಯ ಸದುದ್ದೇಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಪ್ರಭುದೇವ ಅಜ್ಜಪ್ಪಳವರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿಕ್ಷೇತ್ರ ಮೇಲ್ವಿಚಾರಕ ಮಹಾಲಿಂಗಯ್ಯ ಜಿ.ಎಸ್.,ಕಾರ್ಯಕ್ರಮ ಸಂಘಟಕ ಕೃಷ್ಣಾ ಕುರುಬೆಟ್ಟ ಮಾತನಾಡಿದರು. ಸಹಾಯಕ ಫ್ರಾದ್ಯಾಪಕ ಡಾ.ತಿಪ್ಪಣ್ಣ ಕೆ.ಎಸ್., ಸಂಧ್ಯಾ, ಪ್ರಜಾ ಮತ್ತು ಮೇಘಾ ಅವರು ಎಲ್ಲ ಮಹಿಳೆಯರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ರವಿಕುಮಾರ ಬಿ,. ಡಾ.ವಿನಯಕುಮಾರ ಎಂ.ಎಂ., ಅಬ್ದುಲ್ ಗಫಾರ, ಪ್ರಣಿತ್ ಇದ್ದರು. ಜಿಲ್ಲೆಯ ಹೊಂಬರಡಿ ಮತ್ತು ಕನಕಾಪುರ ಗ್ರಾಮಗಳ ಮಹಿಳೆಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.