ಗುತ್ತಲ: ಒಂಟಿ ಸಲಗ ಸೆರೆ ಹಿಡಿಯಲು ತಾಲ್ಲೂಕಿನ ಕೂರಗೂಂದ, ಗುತ್ತಲ ಮತ್ತು ಬಸಾಪುರ ಅರಣ್ಯ ಪ್ರದೇಶದಲ್ಲಿ ಬುಧವಾರ ಮುಂಜಾನೆಯಿಂದಲೇ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಸಾಕಾನೆಗಳೊಂದಿಗೆ ಕಾರ್ಯಚರಣೆ ನಡೆಸಿದರು.
ಸಂಜೆ ಬಸಾಪೂರ ಅರಣ್ಯ ಕಾಡಂಚಿನ ಪ್ರದೇಶದಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಯಿತು. 200 ಮೀಟರ್ ದೂರದಲ್ಲಿ ಮನುಷ್ಯರ ಕಂಡ ಆನೆ ತನ್ನ ಪುಂಡಾಟವನ್ನು ಮುಂದುವರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನ ನಡೆಸಿದರೂ ಒಂಟಿ ಸಲಗ ಸೆರೆಗೆ ಸಿಲುಕಲಿಲ್ಲ.
ಒಂಟಿ ಸಲಗದ ಪುಂಡಾಟ ನೋಡಿದರೆ ಮನುಷ್ಯರ ಮೇಲೆ, ಸಕ್ರೆಬೈಲ್ನ ಸಾಕಾನೆಗಳ ಮೇಲೆ ಹಾಗೂ ಮಾವುತರ ಮೇಲೂ ದಾಳಿ ಮಾಡುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಸಕ್ರೆಬೈಲು ಆನೆ ಬಿಡಾರದಿಂದ ಮತ್ತೆರಡು ಸಾಕಾನೆಗಳನ್ನು ತರಲು ಸಿಬ್ಬಂದಿಯನ್ನು ಕಳಿಸಲಾಗಿದೆ. ಒಟ್ಟು 5 ಸಾಕಾನೆಗಳ ಮೂಲಕ ಕಾಡಾನೆಯನ್ನು ಸೆರೆ ಹಿಡಿಯಲಾಗುವುದು’ ಎಂದು ವಲಯ ಅರಣ್ಯ ಅಧಿಕಾರಿ ರಾಮಪ್ಪ ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಬಸಾಪೂರ ಅರಣ್ಯ ಪ್ರದೇಶಕ್ಕೆ ಕ್ಯಾಂಪ್ ಅನ್ನು ಬದಲಿಸಲಾಯಿತು. ಪ್ರತ್ಯಕ್ಷವಾದ ಕಾಡಾನೆ ಬುಧವಾರ ರಾತ್ರಿ ಸ್ಥಳ ಬದಲಾವಣೆ ಮಾಡಿದರೆ ಮತ್ತೆ ಆನೆ ಪತ್ತೆ ಹಚ್ಚುವದು ಕಷ್ಟದ ಕೆಲಸ ಎಂದು ಅರಣ್ಯ ಅಧಿಕಾರಿಗಳು ಅಭಿಪ್ರಾಯಪಟ್ಟರು.
ಗುರುವಾರದಂದು 5 ಆನೆಗಳಿಂದ ಕಾರ್ಯಾಚರಣೆ ನಡೆಸಿ, ಒಂಟಿ ಸಲಗ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.